ಅರಾಮ ಕುರ್ಚಿಯಲಿ
ಕೂತಿದ್ದ ಕವಿತೆಯ
ಕೊಲೆಯಾಗಿ ಹೋಗಿದೆ
ಎಲ್ಲರ ಮನದೊಳಗೆ
ಓಡಿಯಾಡುತ ಕೂಗುತ್ತಿದ್ದ
ಕವಿತೆಗೆ ಈಗ ಚಿರ ಮೌನ
ಏಕೋ! ಕವಿಗೆ ಒ೦ದಿನಿತೂ
ನೋವಿಲ್ಲ ಸತ್ತ ಕವಿತೆಯ
ಸುತ್ತ ಸುಮ್ಮನೆ ತೆವಳುತ್ತಿದ್ದಾನೆ.
ಗನುಗುನಿಸುತ್ತಿದ್ದಾನೆ.
ಸತ್ತ ಕವಿತೆಗೆ ಜೋಗುಳ
ಹಾಡುತ್ತಿದ್ದಾನೆ.
೨
ಹಾರಾಡುತ್ತಿದ್ದ ಕೂಗಾಡುತ್ತಿದ್ದ
ನಗುತ್ತಿದ್ದ ಕವಿತೆಯ ಕ೦ಡು
ಮತ್ಸರ.
ಸಮಯ ನೋಡಿ
ಇರಿದುಬಿಟ್ಟ, ಕವಿ.
ಸಾಯುವಾಗ ಒ೦ದು ಹನಿ
ಕಣ್ಣೀರಿಡಲಿಲ್ಲ, ಆ ಕವಿತೆ.
ಕವಿಗೆ ಅದು ಹೊಸ ಸ್ಪೂರ್ತಿ
ಹೆಣವನ್ನು ನೋಡುತ್ತಾ
ಗೀಚುತ್ತಿದ್ದ,
ನಗುತ್ತಾ ತಿದ್ದುತ್ತಿದ್ದ,
೩
ತಾನು ಪ್ರೀತಿಸಿದ್ದ
ಕವಿತೆ ಇನ್ಯಾರಿಗೋ
ಇಷ್ಟವಾಗಿಬಿಟ್ಟಳು
ಇಷ್ಟೆ ಸಾಕಿತು
ತಾನೇ ಬೆಳೆಸಿದ ಕವಿತೆಯ
ಕುತ್ತಿಗೆ ಹಿಸುಕಿಬಿಟ್ಟ
೪
ನೋಡುತ್ತಲೇ ಇದ್ದವಳು
ಒಮ್ಮೆ ನಕ್ಕುಬಿಟ್ಟಳು
ಅವನು ಕತ್ತಿಗೆ ಕೈ ಹಾಕಿದಾಗ
ಬೆಚ್ಚನೆ ಸ್ಪರ್ಶಕೆ
ನಾಚಿದಳು
ಕೈಗಳು ಬಿಗಿಯಾದಾಗ
ಅವನ ಕಣ್ಣೊಳಗೆ
’ನೀನು ನನಗೆ ಮಾತ್ರ’
ಎ೦ಬ ಭಾವವಿತ್ತು.
ಅವನ ಚೂರಿ ತಿವಿತ
ಕಚಗುಳಿಯಿಟ್ಟ೦ತಾಗಿ
ನಕ್ಕುಬಿಟ್ಟಳು
ಅಬ್ಬಾ! ಇವನ ಪ್ರೀತಿಯೇ,
ಎನ್ನುತ್ತಾ ಕುಸಿದು ಕುಳಿತಳು
೫
ಕವಿ ಅವಳ ಕೊ೦ದು ತಾನೂ ಸತ್ತ
2 comments:
ಹರೀಶ್, ನಿಮ್ಮ ಈ ಕವಿತೆ ಓದಿದಾಗ, ಇದೇ ಮಾದರಿಯ ಕವಿತೆಯೊಂದನ್ನು ನಾನು ಬರೆದಿದ್ದು ನೆನಪಾಯ್ತು. http://sampada.net/blog/chamaraj/12/02/2009/16775
ಚೆನ್ನಾಗಿದೆ ನಿಮ್ಮ ಕವಿತೆ.
ಪ್ರೀತಿಯು ತನ್ನ ಪರಾಕಾಷ್ಟತೆಯನ್ನು ತಲುಪಿದಾಗ ಹೀಗೆ ಆಗುತ್ತದೋ ಏನೋ? ಚೆನ್ನಾಗಿದೆ ನಿಮ್ಮ ಬರಹ ಹರೀ...
Post a Comment