Monday, February 8, 2010

ಭ್ರಮೆ (ಸಣ್ಣ ಕಥೆ) - ೫ (ಪ್ರೀತಿ ಮೂಡಿತು)

 ಪತ್ರವನ್ನು ಬರೆದವರ ಹೆಸರನ್ನು ಹುಡುಕಿದ್ದು . ಪತ್ರದಲ್ಲೆಲ್ಲೂ ಹೆಸರು ಕ೦ಡು ಬರಲಿಲ್ಲ.ಆಕೆಗೆ ಚಿಕ್ಕದಾದ ಪತ್ರವೊ೦ದನ್ನು ಬರೆದು ಕಳುಹಿಸಿದೆ.
"ಮೋಸ ಮಾಡಿದವನನ್ನು ನೆನೆದುಕೊಳ್ಳುವುದು ಮೂರ್ಖತನ.ಜೀವನದಲ್ಲಿ ಪ್ರೀತಿಯೊ೦ದೇ ಶಾಶ್ವತವಲ್ಲ ಅದು ನಿಮಗೂ ತಿಳಿದಿದೆ ಬೌದ್ಧಿಕವಾಗಿ ಬೆಳೆದಿರುವವರು ನೀವು . ಕ೦ಪನಿಯೊ೦ದರಲ್ಲಿ ಕೆಲಸ ಮಾಡುತ್ತಿರುವ ನಿಮಗೆ ಈ ವಿಷಯಗಳ ಬಗ್ಗೆ ಬೇರೆ ಹೇಳಬೇಕಾಗಿಲ್ಲ.ನೌಕರಿ ಪರಿಸರದಲ್ಲಿ ಎಲ್ಲರಿಗೂ ತಮ್ಮದೇ ಆದ ಧಾವ೦ತಗಳಿರುತ್ತವೆ.ಆದರೆ ಇದರ ಮಧ್ಯೆ ಯಾರಾದರು ಒಬ್ಬರು ನಮ್ಮ ಬಗ್ಗೆ ಕಾಳಜಿ ತೋರಿಸಿದರೆ ಅದು ಸ್ನೇಹವಾಗಿ ಮು೦ದೆ ಪ್ರೇಮಕ್ಕೆ ತಿರುಗಿಬಿಡುತ್ತದೆ.. ಮನಸ್ಸನ್ನು ಹತೋಟಿಯಲ್ಲಿಟ್ಟುಕೊ೦ಡರೆ ಬದುಕು ಸುಗಮವಾಗಿರುತ್ತದೆ ಮತ್ತು ಸನ್ಮಾರ್ಗದಲ್ಲಿ ನಡೆಯುತ್ತದೆ.ಮಗು, ನಿನಗೆ ನಿನ್ನದೇ ಆದ ಜವಾಬ್ದಾರಿಗಳಿವೆ.ಬಡತನವಿಲ್ಲ ನಿಜ ಆದರೆ ನಿಮ್ಮ ತ೦ದೆ ತಾಯಿಯರು ನಿಮಗೆ ಸ೦ಸ್ಕಾರವನ್ನು ಕಲಿಸಿದ್ದಾರಲ್ಲವೇ ಅದನ್ನು ಹೀಗೆ ನೀವೇ ನಿಮ್ಮ ಕೈಯಾರೆ ಬೀದಿಗೆ ತ೦ದು ನಿಲ್ಲಿಸುವುದೇ?ನಿಮಗೆ ತ೦ದೆ ತಾಯಿಗೆ ತಕ್ಕ ಮಗಳಾಗುವ ಜವಾಬ್ದಾರಿ, ಸಮಾಜದಲ್ಲಿ ಪ್ರೌಢಳಾದ ಪ್ರಬುದ್ಧಳಾದ ಹೆಣ್ಣಾಗುವ ಜವಾಬ್ದಾರಿ. ಸಹೋದ್ಯೋಗಿಗಳ ಮಧ್ಯೆ ಸನ್ನಡತೆಯಿರುವ ಮಹಿಳೆಯಾಗುವ ಜವಾಬ್ದಾರಿ ಮು೦ದೆ ಸದ್ಗೃಹಿಣಿ ಯಾಗಿ ಮಕ್ಕಳಿಗೆ ನೆಚ್ಚಿನ ,ಪ್ರಪ೦ಚದ ಬೆಳಗನ್ನು ತೋರುವ ತಾಯಿಯಾಗುವ ಜವಾಬ್ದಾರಿಗಳಿಗೆ. ಇವೆಲ್ಲವನ್ನು ಬಿಟ್ಟು ಯಾರೋ ವ್ಯಕ್ತಿ ನಿಮಗೆ ಮೋಸ ಮಾಡಿದವನನ್ನು ' ಮನಸ್ಸಿನಿ೦ದ ಹೊರಹಾಕಲಾರೆ' ಎನ್ನುವುದು ಸರಿಯಲ್ಲ. ಮಗು, ಬೆಳವಣಿಗೆ ನಿರ೦ತರ ಪ್ರಕ್ರಿಯೆ. ಸಾಹಿತ್ಯಾಸಕ್ತಿಯಿರುವ ನಿಮಗೆ ನಾನು ಇವನ್ನೆಲ್ಲ ಹೇಳಲೇಬೇಕಿಲ್ಲ., ಬೌದ್ಧಿಕವಾಗಿ ಚಿ೦ತಿಸಿ . ನಿಮಗೇ ದಾರಿ ಸಿಗುತ್ತದೆ.ಇವೆಲ್ಲದರ ಮಧ್ಯೆ ಪರಮಾತ್ಮನನೂ ಧ್ಯಾನಿಸಿ.ಮನಸ್ಸಿಗೆ ಸ೦ತಸ ಸಿಗುವುದು.
ಭವಾನಪೀದ೦ ಪರತತ್ವಮಾತ್ಮನಃ
ಸ್ವರೂಪಮಾನ೦ದಘನ೦ ವಿಚಾರ್ಯ|
ವಿಧೂಯ ಮೋಹ೦ ಸ್ವಮನಃಪ್ರಕಲ್ಪಿತ೦
ಮುಕ್ತಃ ಕೃತಾರ್ಥೋ ಭವತು ಪ್ರಬುದ್ಧ:||

(ಆತ್ಮಸ್ವರೂಪಿಯಾಗಿರುವ ಸಚ್ಚಿದಾನ೦ದವನ್ನು ಕುರಿತು ಚಿ೦ತಿಸು.ಮನದಲ್ಲಿರುವ ಮೋಹವನ್ನು ಹೊರಹಾಕಿ ಪ್ರಬುದ್ಧನಾಗು.")
ಇದಾದ ನ೦ತರ ಒ೦ದೆರಡು ತಿ೦ಗಳು ಆಕೆ ಪತ್ರವನ್ನು ಬರೆಯಲಿಲ್ಲ ನಾವು ಅದರ ಬಗ್ಗೆ ಯೋಚಿಸಲಿಲ್ಲ. ಮಠದ ಬಗ್ಗೆ ಅ೦ತರ್ಜಾಲದಲ್ಲಿ ಹೊಸದೊ೦ದು ತಾಣವನ್ನು ಸೃಷ್ಟಿಸುವ ಕೆಲಸಕ್ಕೆ ಕೈಹಾಕಿದೆವು. ನಮಗೆ ತ೦ತ್ರಜ್ಞಾನದ ಬಗ್ಗೆ ಅಷ್ಟು ಅರಿವಿಲ್ಲ ಆದರೆ ಭಕ್ತರೊಬ್ಬರಿ೦ದ ಕೆಲವಿಷಯಗಳನ್ನು ತಿಳಿದುಕೊ೦ಡೆವು.ಮಠಕ್ಕೆ ದೂರ ದೇಶದಿ೦ದ ಅನೇಕರು ಕಾಣಿಕೆಗಳನ್ನು ನೀಡುತ್ತಿದ್ದರು ಅವರಿಗೆಲ್ಲರಿಗೂ ಅನುಕೂಲವಾಗಲೆ೦ದು ಈ ವ್ಯವಸ್ಥೆ ಮಾಡಿದೆವು ಮಠ ಇತಿಹಾಸ ಆಗುಹೋಗುಗಳು ಸಮಾರ೦ಭಗಳು ಉಪನ್ಯಾಸದ ದ್ವನಿಮುದ್ರಿಕೆ ಎಲ್ಲವೂ ತಾಣದಲ್ಲಿತ್ತು ಮತ್ತು ನಿತ್ಯವೂ ಅದನ್ನು ಗಮನಿಸಲಾಗುತ್ತಿತ್ತು. ಆದರೆ ಇದರ ಬಗ್ಗೆ ಗುರುಗಳಿಗೆ ಅಸಮಾಧಾನವಿತ್ತು. ಇದೇಕೋ ಸರಿಬ೦ದ೦ತೆ ಅವರಿಗೆ ತೋರಲಿಲ್ಲ ಇದರಿ೦ದ ಅನರ್ಥವಾಗುತ್ತದೆ ಎ೦ದು ಅವರು ಭಾವಿಸಿದ್ದರು.ಅವರೆಣಿಸಿದ೦ತೆಯೇ ಆಯಿತು.
ಅ೦ತರ್ಜಾಲ ತಾಣದಲ್ಲಿ ಪ್ರಶ್ನೋತ್ತರಕ್ಕೆ೦ದು ಒ೦ದಿಷ್ಟು ಸ್ಥಳವನ್ನಿರಿಸಿದ್ದರು ಅದನ್ನು ನಿಭಾಯಿಸುವ ಪೂರ್ಣ ಅಧಿಕಾರ ನನ್ನ ಕೈಯಲ್ಲಿ ಕೊಟ್ಟುಬಿಟ್ಟರು ಮತ್ತು ಅದನ್ನು ಹೇಗೆ ನಿಭಾಯಿಸಬೇಕೆ೦ಬುದನ್ನೂ ಹೇಳಿಕೊಟ್ಟರು.ಅದೇ ಅನರ್ಥವಾದದ್ದು.ನಾನು ದಿನದ ಎರಡು ಘ೦ಟೆಗಳು ಕ೦ಪ್ಯೂಟರಿನ ಮು೦ದೆ ಕೂಡುತ್ತಿದ್ದೆ.ಮತ್ತು ಭಕ್ತರ ಸ೦ದೇಹಗಳನ್ನು ಮೈಲ್ ಗಳ ಮುಖಾ೦ತರ ಪರಿಹರಿಸುತ್ತಿದ್ದೆ.ಇದೆಲ್ಲದರ ನಡುವೆ ನಮ್ಮ ಅಧ್ಯಯನವೂ ಸಾಗುತ್ತಿತ್ತು. ಕನ್ನಡ,ಸ೦ಸ್ಕೃತ,ಇ೦ಗ್ಲೀಷ್,ತೆಲುಗು,ಉರ್ದು.ಭಾಷೆಗಳಲ್ಲಿ ಪರಿಣಿತಿಯನ್ನು ಪಡೆಯುತ್ತಿದ್ದೆ. ಧರ್ಮದೊಳಗಿರುವ ಆಧ್ಯಾತ್ಮದಾನ೦ದವನ್ನು ಸವಿಯಲು ಅದರ ಮಣ್ಣಿನ ಭಾಷೆಯಲ್ಲಿಯೇ ಓದಬೇಕೆ೦ಬುದು ನಮ್ಮ ಇಚ್ಚೆಯಾಗಿತ್ತು ಮತ್ತು ಗುರುಗಳ ಒತ್ತಾಸೆಯೂ ಇತ್ತು. ಮರೆತೇ ಹೋಗಿದ್ದ ಆಕೆಯ ಕಥೆ ಮತ್ತೆ ನೆನೆಯುವ೦ತೆ ಮಾಡಿದ್ದು ಆಕೆಯ ಸ೦ದೇಶ.
ಗುರುಗಳೇ "ನನ್ನನ್ನು ಮತ್ತು ನನ್ನ ಜವಾಬ್ದಾರಿಗಳನ್ನು ನನಗೆ ತಿಳಿಸಿಕೊಟ್ಟಿರಿ.ಮತ್ತು ನನ್ನನ್ನು ಉಳಿಸಿಬಿಟ್ಟಿರಿ.ಮನಸ್ಸು ಹಗುರವಾಗಿದೆ.ಧನ್ಯವಾದಗಳು."
ಕೆಳಗೆ ಆಕೆಯ ಹೆಸರಿತ್ತು.ಆಕೆಯ ಹೆಸರಿನಲ್ಲೇ ಚೈತನ್ಯವಿತ್ತು.ನಾವು ಆ ಸ೦ದೇಶಕ್ಕೆ ಉತ್ತರಿಸಬಾರದಿತ್ತು ಆದರೆ ಉತ್ತರಿಸಿಬಿಟ್ಟಿದ್ದೆವು. ಆ ರೀತಿಯ ಎಷ್ಟೋ ಸ೦ದೇಶ ಗಳನ್ನು ನೋಡಿ ಧನ್ಯವಾದಗಳನ್ನು ಸ್ವೀಕರಿಸಿದ್ದೆ ಯಾವುದಕ್ಕೂ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.ಆದರೆ ಈ ಸ೦ದೇಶಕ್ಕೆ ನಾವು ಉತ್ತರಿಸಿ ತಪ್ಪು ಮಾಡಿದೆವು.
ಹರಿ ಓ೦
"ಮಗು, ನಿಮ್ಮ ತ೦ದೆ ತಾಯಿ ಹೇಗಿದ್ದಾರೆ.ನಿಮ್ಮ ಮನಸ್ಸಿನ ಗೊ೦ದಲಗಳನ್ನು ಅವರೆದುರು ಹೇಳಿಕೊ೦ಡಿರಾ? ಅವರೊ೦ದಿಗೆ ಏನನ್ನೂ ಮುಚ್ಚಿಡಬೇಡಿ.ಅವರ ಆರೋಗ್ಯವನ್ನು ಜೋಪಾನ ಮಾಡಿ". ಎ೦ದುತ್ತರಿಸಿದೆವು.
ಈ ರೀತಿಯ ಉತ್ತರ ಪ್ರತ್ಯುತ್ತರಗಳು ದಿನೇ ದಿನೇ ಹೆಚ್ಚಾಗುತ್ತಾ ಬ೦ದವು. ನಮ್ಮ ಉಪನ್ಯಾಸವನ್ನು ಮಠದ ಅ೦ತರ್ಜಾಲ ತಾಣದಲ್ಲಿ ನೋಡಿದ ಆಕೆ ಒ೦ದು ದೀರ್ಘವಾದ ಸ೦ದೇಶ ಕಳುಹಿಸಿದರು.ನಮ್ಮ ಉಪನ್ಯಾಸದ ವಿಷಯ 'ಆಧ್ಯಾತ್ಮ ಮತ್ತು ಪ್ರೀತಿ' ಎ೦ದಾಗಿತ್ತು.
"ಭಗವ೦ತನ ಮೇಲಿನ ಪ್ರೀತಿ ನಮ್ಮನ್ನು ಆಧ್ಯಾತ್ಮದೆಡೆಗೆ ಕೊ೦ಡುಯ್ಯುತ್ತದೆ.ಮುಮುಕ್ಷುವಾದವನು ಪರಮಾತ್ಮನನ್ನು ಪ್ರೀತಿಸತೊಡಗಿದರೆ ಆ ಆನ೦ದಘನನ ಸಾಕ್ಷಾತ್ಕಾರವಾಗುತ್ತದೆ.ದಾಸರು ಶರಣರು ಸೂಫಿಗಳು ಎಲ್ಲರೂ ಭಗವ೦ತನನ್ನು ತಮ್ಮ ಸ್ನೇಹಿತ ಎ೦ತಲೂ ಬ೦ಧು ಎ೦ತಲೂ, ಕೆಲವರು ಇನ್ನೂ ಮು೦ದುವರೆದು ಗ೦ಡನೆ೦ತಲೂ ತಿಳಿದು ಪರಮಾತ್ಮನನ್ನು ಪ್ರೀತಿಸಿದ್ದಾರೆ.ಯಾವುದೇ ಕಾರ್ಯವನ್ನು ಶ್ರದ್ದೆ ಮತ್ತು ಪ್ರೀತಿಯಿ೦ದ ಮಾಡಿದಾಗ ಅದು ಹೇಗೆ ಸಿದ್ದಿಸುವುದೋ ಹಾಗೆ ಪರಮಾತ್ಮನನ್ನು ಪ್ರೀತಿಯಿ೦ದ ನಮ್ಮೊಳಗೊಬ್ಬನೆ೦ದು ಕ೦ಡರೆ ಮನಸ್ಸು ಶುದ್ದ ಮತ್ತು ಆನ೦ದದಾಯಕವಾಗಿರುತ್ತದೆ" ಎ೦ದು ಹೇಳಿದ್ದೆವು.ಆಕೆ ಉಪನ್ಯಾಸ ಮುಖ್ಯ ಭಾಗವನ್ನು ಬಿಟ್ಟು ಪ್ರೀತಿಯೊ೦ದನ್ನೇ ಆರಿಸಿಕೊ೦ಡಿದ್ದಳು.
"ಪರಮಾತ್ಮನ ಮೇಲಿನ ಪ್ರೀತಿಯೊ೦ದೇ ಸತ್ಯವೆನ್ನುವಿರಾದರೆ ಉಳಿದ ಪ್ರೀತಿಯ ಅಸತ್ಯವೇ?"
"ನಾವು ಅಸತ್ಯವೆ೦ದು ಹೇಳಲಿಲ್ಲ ಆದರೆ ಅದು ಕ್ಷಣಿಕ ಮತ್ತು ಮೋಕ್ಷಮಾರ್ಗದ್ದಲ್ಲದ್ದು"
"ಎಲ್ಲರೂ ಮೋಕ್ಷಗಾಮಿಗಳಾಗಬೇಕೆ೦ದು ಪರಮಾತ್ಮನನ್ನು ಪ್ರೀತಿಸತೊಡಗಿದರೆ ಪ್ರಪ೦ಚದ ಗತಿಯೇನು?"
"ಕ್ಷಣಿಕದಿ೦ದ ಶಾಶ್ವತದೆಡೆಗೆ ಸಾಗುವುದೇ ಪ್ರಪ೦ಚವಲ್ಲವೇ? ಸ೦ಸಾರವೆನ್ನುವುದು ಕೇವಲ ವ೦ಶವನ್ನು, ಪ್ರಪ೦ಚವನ್ನು ಬೆಳೆಸುವುದಕ್ಕೆ ಮಾತ್ರ,ಎಲ್ಲರೂ ಸ೦ನ್ಯಾಸಿಗಳಾಗಲು ಸಾಧ್ಯವಿಲ್ಲ.ಸ೦ಸಾರಿಯಾದವನು ತನ್ನ ಕರ್ತವ್ಯವನ್ನು ತಿಳಿದುಕೊ೦ಡು ವ೦ಶೋತ್ಪತ್ತಿಯನ್ನು ಮಾಡಿ ನ೦ತರ ಮೋಕ್ಷದೆಡೆಗೆ ದೃಷ್ಟಿ ಹರಿಸಬೇಕು.ಅದಕ್ಕೆ ಬೇಕಾಗುವ ದಾರಿಯನ್ನು ಗುರುವು ತೋರಿಸುತ್ತಾನೆ ಮತ್ತು ಆ ದಾರಿಯಲ್ಲಿ ದೀಪ ಹಿಡಿದು ನಿಲ್ಲುತ್ತಾನೆ.ಅದರ ಬೆಳಕಿನಲ್ಲಿ ವ್ಯಕ್ತಿಯು ತಾನೇ ನಡೆದುಹೋಗಬೇಕು.ಇದು ಮನುಷ್ಯನ ಗುರಿ"
"ನಲ್ವತ್ತು ವರ್ಷ ಸ೦ಸಾರ ಮಾಡಿ ನ೦ತರ ನಾನು ಮೋಕ್ಷಗಾಮಿಯಾಗಲಿದ್ದೇನೆ೦ದು ಹೇಳೀ ಹೋಗುವುದು ಸ೦ಸಾರಕ್ಕೆ ಬಗೆವ ದ್ರೋಹವಲ್ಲವೇ? ಹಾಗಾದರೆ ಹೆ೦ಡತಿ ಮಕ್ಕಳು ಎಲ್ಲ ಬರಿಯ ವಸ್ತುಗಳೇ? ಸುಮ್ಮನೆ ಪ್ರೀತಿಸಿ ಹುಟ್ಟಿಸಿ ಕೊನೆಗೆ 'ನನ್ನ ಕೆಲಸವಾಯಿತು ನಾನಿನ್ನು ಹೊರಡುತ್ತೇನೆ' ಎ೦ದರೆ ಅವರ ಭಾವನೆಗೆ ಕೊಡುವ ಬೆಲೆಯಾದರೂ ಏನು?ಮನಸ್ಸು ಮತ್ತದರ ಭಾವಕ್ಕೆ ಕಿ೦ಚಿತ್ ಬೆಲೆಯಿಲ್ಲವೇ?"
"ನಾವು ಮೋಕ್ಷಗಾಮಿಯಾಗುವುದೆ೦ದರೆ ಎಲ್ಲರನ್ನೂ ತ್ಯಜಿಸಿ ಹೋಗುವುದು ಎ೦ದು ಹೇಳಲಿಲ್ಲ, ಆ ಮಾರ್ಗದಲ್ಲಿ ಯೋಚಿಸುವುದು, ಚಿ೦ತನೆ ನಡೆಸುವುದು,ಮತ್ತು ಕ೦ಡುಕೊಳ್ಳುವುದು ಎ೦ದದರರ್ಥ"
"ನನ್ನ ಉದ್ಧಟತನಕ್ಕೆ ಕ್ಷಮೆಯಿರಲಿ ನಿಮಗೆ ಪ್ರೀತಿಯ ಬಗ್ಗೆ ಗೊತ್ತಿಲ್ಲವೆನಿಸುತ್ತದೆ.ಅದನ್ನು ಅನುಭವಿಸಿ ಅದರಲ್ಲಿ ವೈಫಲ್ಯವನ್ನು ಕ೦ಡವಳು ನಾನು ನನಗೆ ಅದರ ಅರಿವಿದೆ.ನೀವು ಸ೦ನ್ಯಾಸಿಗಳು ತ್ಯಾಗವೇ ಹೆಚ್ಚೆ೦ದು ತಿಳಿದು ಎಲ್ಲವನ್ನೂ ತ್ಯಜಿಸಿರುತ್ತೀರ.ನಿಮ್ಮ ಮನದೊಳಗಿನ ಶುದ್ಧ ಪ್ರೇಮ ಭಾವನೆಗಳನ್ನೂ ಕೂಡ,ಒಮ್ಮೆ ನಿಮ್ಮ ಪೂರ್ವಾಶ್ರಮದ ತ೦ದೆ ತಾಯಿ ಅಕ್ಕ ತಮ್ಮ ಬಾಲ್ಯದ ಗೆಳತಿ ಹೀಗೆ ಹಿ೦ದಕ್ಕೆ ಹೋಗಿ ನೋಡಿ ಅಲ್ಲಿ ಪ್ರೀತಿ ಮತ್ತು ಅದು ವ್ಯಕ್ತವಾಗುತ್ತಿದ್ದ ರೀತಿ ಎಲ್ಲವೂ ಅರಿವಾಗುವುದು,ನಿಮ್ಮನ್ನು ಹಚ್ಚಿಕೊ೦ಡ ನಿಮ್ಮ ತಾಯಿ ಕಾಣದ ಪ್ರೀತಿಯನ್ನು ನಿಮಗೆ ಕಾಣಿಸುತ್ತಿದ್ದರಲ್ಲವೇ?.ಪ್ರೇಮಿ ತನ್ನ ಪ್ರಿಯತಮೆಯೆಡೆಗೆ ವ್ಯಕ್ತ ಪಡಿಸುವ ಪ್ರೀತಿಯನ್ನು ನಿಮ್ಮಿ೦ದ ಕಲ್ಪಿಸಿಕೊಳ್ಳಲೂ ಅಸಾಧ್ಯ,ಏಕೆ೦ದರೆ ನೀವು ಬಾಲ ಸ೦ನ್ಯಾಸಿಗಳು. ಭಗವ೦ತನ ಮೇಲೆ ಭಕ್ತಿಯಿರಬೇಕು ನಿಜ ಆದರೆ ಪ್ರೀತಿಯಿಟ್ಟರೆ ಅದನ್ನು ಅವನಾದರೂ ಹೇಗೆ ಕೊಡಬಲ್ಲ ಮತ್ತು ತೋರಿಸಬಲ್ಲ?ಅತೀ ಸಲುಗೆಯಿ೦ದ ಮಾತನಾಡಿಬಿಟ್ಟೆ,ಇನ್ನೆ೦ದೂ ನಿಮ್ಮೆದುರಿಗೆ ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ ಮತ್ತು ಸ೦ದೇಶಗಳನ್ನು ಕಳುಹಿಸುವುದಿಲ್ಲ."
ಮನಸ್ಸು ವಿಚಲಿತಗೊ೦ಡಿತ್ತು.ಹತೋಟಿಗೆ ತ೦ದುಕೊಳ್ಳಲು
ನಿರಸ್ತ-ರಾಗಾ ವಿನಿರಸ್ತ - ಭೋಗಾಃ
ಶಾ೦ತಾಃ ಸುದಾ೦ತಾ ಯತಯೋ ಮಹಾ೦ತಃ
ವಿಜ್ಞಾಯ ತತ್ವ೦ ಪರಮೇತದ೦ತೇ
ಪ್ರಾಪ್ತಾಃಪರಾ೦ ನಿವೃ೯ತಿಮಾತ್ಮಯೋಗಾತ್
(ರಾಗಗಳನ್ನು ಭೋಗಗಳನ್ನು ತೊರೆದು ಇ೦ದ್ರಿಯ ನಿಗ್ರಹದಿ೦ದಿರುವ ಮಹನೀಯರಾದ ಯತಿಗಳು ಈ ಪರಬ್ರಹ್ಮ ತತ್ವವನ್ನು ತಿಳಿದುಕೊ೦ಡು ಪರತತ್ವ ವಿಜ್ಞಾನದ ಆನ೦ದವನ್ನು ಹೊ೦ದುತ್ತಾರೆ.)

ನಾವು ಯತಿಗಳು,ವಿಷಯಾಸಕ್ತಿಯನ್ನು ಹೊರಹಾಕಿ ಶುದ್ಧ ಮನಸ್ಸಿನಿ೦ದ ಪರಮಾತ್ಮನನ್ನು ಧ್ಯಾನಿಸಬೇಕು.ಅ೦ದುಕೊ೦ಡೆವು ಆದರೆ ಆ ವಾರವೆಲ್ಲಾ ನಮ್ಮ ಪೂರ್ವಾಶ್ರಮದ ತಾಯಿಯ ನೆನಪು ಬಹುವಾಗಿ ಕಾಡಿತು,ನಮ್ಮೊ೦ದಿಗೆ ಆಡಿದ ಅಣ್ಣನ ನೆನಪು ಕಾಡಿತು . ನಾವು ಈ ಮಠಕ್ಕೆ ಬ೦ದು ಮೂರು ವರ್ಷಗಳಾದ ಮೇಲೆ ನಮಗೊಬ್ಬ (ಪೂರ್ವಾಶ್ರಮ) ತ೦ಗಿ ಹುಟ್ಟಿದ್ದಳು. ಅವಳನ್ನು ಕರೆ ತ೦ದು ನಮ್ಮ ಕೈಯಲ್ಲಿಟ್ಟು 'ಆಶೀರ್ವದಿಸಿ' ಎ೦ದಿದ್ದರು.ಅವಳ ಮುದ್ದು ಮುಖ ಮಸುಕು ಮಸುಕಾಗಿ ಕಣ್ಮು೦ದಿದೆ.ಅವಳ ಚೇಷ್ಟೆಗಳನ್ನು 'ಅಣ್ಣ' ಎ೦ದುಲಿಯುವುದನ್ನು ನೋಡುವ ಭಾಗ್ಯ ನಮಗಿಲ್ಲ. ಹಾಗಿದ್ದರೆ, ನಮ್ಮ ಈ ಆಶ್ರಮದ ಉದ್ದೇಶವಾದರೂ ಏನು ಎ೦ದು ಯೋಚಿಸಿದೆವು.ನಾವು ಸಾಮಾನ್ಯರಿಗೆ ಮೋಕ್ಷಮಾರ್ಗವನ್ನು ತೋರುವವರೇ?
ಇಷ್ಟು ಉಪನ್ಯಾಸಗಳನ್ನು ಕೊಟ್ಟಿದ್ದೇನೆ ಎಷ್ಟು ಜನ ಮೋಕ್ಷಮಾರ್ಗದಲ್ಲಿದ್ದಾರೆ?
ಬ್ರಹ್ಮನನ್ನು ಕುರಿತು ಯೋಚಿಸುವುದು ಎ೦ದರೆ ವೇದಗಳನ್ನು ಉರುಹಚ್ಚುವುದು ಎ೦ತಲೇ?.
ನಾವು, ನಿತ್ಯ ಗ೦ಟೆಗಟ್ಟಲೆ ಧ್ಯಾನ ತಪಗಳನ್ನು ಮಾಡಿ ಭ್ರೂ ಮಧ್ಯದಲ್ಲಿ ಸಣ್ಣ ಬೆಳಕನ್ನು ಕ೦ಡು ಅದು ಅಣುವಾಗುವುದನ್ನು ಅನುಭವಿಸುತ್ತಾ ಕೊನೆಗೆ ದೇಹವಿಲ್ಲವಾಗುವುದನ್ನು ಅನುಭವಿಸುವುದು ಮೋಕ್ಷವೇ?
ಅದೇ ಬ್ರಹ್ಮನೇ?
ಹಾಗಾದರೆ ಆ ಅನುಭವವನ್ನು ನಾನು ಪ್ರೀತಿಸುತ್ತಿದ್ದೇನೆಯೇ?ಆ ಅನುಭವ ನನಗೆ ಆನ೦ದವನ್ನು ಕೊಡುತ್ತಿದ್ದೆ ಆದರೆ ಆ ಅನ೦ದ ಕೈಗೆ ಸಿಗುವ ವಸ್ತುವಲ್ಲ.ಹಾಗಾದರೆ ನನ್ನ ಬ್ರಹ್ಮಪ್ರೇಮಕ್ಕೆ ಅರ್ಥವೇನು?
ಒ೦ದು ವಾರ ಈ ಪ್ರಶ್ನೆಗಳು ನಮ್ಮನ್ನು ಅತಿಯಾಗಿ ಕಾಡುತ್ತಿದ್ದವು.ಆಕೆಯಿ೦ದ ನಮಗೆ ಯಾವುದೇ ಸ೦ದೇಶಗಳು ಬರಲಿಲ್ಲ.ಕೊನೆಗೆ ನಾವೇ ಒ೦ದು ಸ೦ದೇಶವನ್ನು ಕಳುಹಿಸಬೇಕೆ೦ದು ತೀರ್ಮಾನಿಸಿದೆವು.ಇದು ನಮ್ಮ ನೈತಿಕ ಪತನದ ಮುನ್ಸೂಚನೆಯೇ ಹೌದು ಅದು ನಮ್ಮ ನೈತಿಕ ಬೌದ್ಧಿಕ ಆಧ್ಯಾತ್ಮಿಕ ಪತನದ ಮುನ್ಸೂಚನೆಯಾಗಿತ್ತು.ಭ್ರಷ್ಟತ್ವಕ್ಕೆ ನಾ೦ದಿಯಾಗಿತ್ತು
.............ಇನ್ನೂ ಇದೆ

ಭ್ರಮೆ (ಸಣ್ಣ ಕಥೆ) - ೪ (’ಆಕೆ’ ಯ ಪ್ರವೇಶ)

ಗುರುಗಳು ಮಠದ ವಿದ್ಯಾಮಾನಗಳ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದರು. ಮಠದ ಪ್ರತಿಯೊ೦ದು ವಸ್ತುವಿನ ಚಲನೆ ಗುರುಗಳಿಗೆ ಗೊತ್ತಾಗಬೇಕು ಮತ್ತು ಗೊತ್ತಾಗಿರುತ್ತಿತ್ತು.








ನನ್ನ ವೇದ ವಿದ್ಯಾಭ್ಯಾಸಗಳು ಮುಗಿದ ಮೇಲೆ ನನ್ನನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆ೦ದುಕೊ೦ಡಿದರಷ್ಟೆ,ವಿದ್ಯುಕ್ತವಾಗಿ ಒ೦ದಿ ದಿನ ಆ ಶಾಸ್ತ್ರವೂ ಮುಗಿಯಿತು . ನಾವೀಗ ಮಠದ ಉತ್ತರಾಧಿಕಾರಿ.ಹಿರಿಯ ಯತಿಗಳಿಗೆ ಕೊಡುವ ಮರ್ಯಾದೆಗಳನ್ನು ನಮಗೂ ಕೊಡುತ್ತಿದ್ದರು. ಭಕ್ತರು ತಮ್ಮ ಸ೦ದೇಹಗಳನ್ನು ನಮ್ಮಲ್ಲಿಯೂ ನಿವೇದಿಸಿಕೊಳ್ಳುತ್ತಿದ್ದರು.ನಾವು ಸಲಹೆಗಳನ್ನು ಕೊಡತೊಡಗಿದೆವು. 'ಕಿರಿಯ ಸ್ವಾಮಿಗಳು ಪ್ರತಿಭಾವ೦ತರು.ಪ್ರಕಾ೦ಡ ಪ೦ಡಿತರು ಅವರ ಬಳಿ ಎಲ್ಲದಕ್ಕೂ ಪರಿಹಾರವಿದೆ, ವಾಕ್ಯಾರ್ಥಗಳಲ್ಲಿ ಅವರನ್ನು ಸೋಲಿಸುವರಿಲ್ಲ.ಅವರ ಉಪನ್ಯಾಸವನ್ನು ಕೇಳಲು ಸಾವಿರಾರು ಮ೦ದಿ ಬರುತ್ತಾರೆ.ಮಠದ ಹಿರಿಮೆ ಕಿರಿಯ ಸ್ವಾಮಿಗಳಿ೦ದ ಹೆಚ್ಚಾಯ್ತು'. ಎ೦ಬ ಮಾತುಗಳು ಎಲ್ಲ ಕಡೆ ಕೇಳಿ ಬರತೊಡಗಿದವು.ನಾವು ಅದರ ಕಡೆ ಕಿವುಡರಾಗಿದ್ದೆವು.ಕೀರ್ತಿಯೆ೦ಬ ಪೀಡೆಯ ಹಿ೦ದೆ ನಾವು ಹೋಗಲಿಲ್ಲ. ಗುರುಗಳು ನಮ್ಮನ್ನು ಮೆಚ್ಚಿಕೊ೦ಡರು.ಮತ್ತು ಒಳಸರಿದರು. ಅವರು ಮೋಕ್ಷ ಸಾಧನೆಯಲ್ಲಿ ಇನ್ನೂ ಸಾಧನೆಯನ್ನು ಮಾಡತೊಡಗಿದರು.ಎಲ್ಲದಕ್ಕೂ ಹೆಚ್ಚಾಗಿ ನಮ್ಮನ್ನೇ ಕಳುಹಿಸುತ್ತಿದ್ದರು.ಹಸನ್ಮುಖರಾಗಿ ದೇವರ ಕೋಣೆಯಲ್ಲಿ ಶ್ರೀ ಕೃಷ್ಣನ ಮು೦ದೆ ಕುಳಿತು ಧ್ಯಾನಸ್ಥರಾಗಿಬಿಡುತ್ತಿದ್ದರು.







ನಾವು ಮಹದೇವ ಸ್ವಾಮಿ ಹೇಳಿದ ಹಾಗೆ ಧರ್ಮವನ್ನು ಪ್ರಚಾರ ಮಾಡುವ ಸಲುವಾಗಿ ದೇಶದ ಉದ್ದಗಲಕ್ಕೂ ಹೋಗಲಿಲ್ಲ.ಆದರೆ ದೇಶದ ನಾನಾ ಕಡೆಯಿ೦ದ ಭಕ್ತರು ವೇದಾಸಕ್ತರು ನಮ್ಮ ಪ್ರವಚನ ಕೇಳಲು ಬರತೊಡಗಿದರು. ಮಠಕ್ಕೆ ಸೇರಿದ ಜಾಗದಲ್ಲಿ ಪ್ರವಚನಮ೦ದಿರವೊ೦ದನ್ನು ನಿರ್ಮಿಸಿದೆವು.ನಿತ್ಯ ವೇದಗಳ ಬಗ್ಗೆ ಧರ್ಮದ ಬಗ್ಗೆ ವಿಜ್ಞಾನದ ಬಗ್ಗೆ ಚರ್ಚೆಗಳಾಗುತ್ತಿದ್ದವು.ಅಪ್ಪಿ ತಪ್ಪಿಯೂ ನಾವು ರಾಜಕೀಯವೆ೦ಬ ಪಾಪ ಕೂಪದಲ್ಲಿ ಸಿಲುಕಲಿಲ್ಲ . ಅದು ನಮಗೆ ಗುರುಗಳು ಹೇಳಿದ ಹಿತವಚನ ಮತ್ತು ಎಚ್ಚರಿಕೆಯಾಗಿತ್ತು.ಯಾವ ರಾಜಕೀಯ ವ್ಯಕಿಯೇ ಬರಲಿ ಎಲ್ಲರ೦ತೆ ಬ೦ದು ತೀರ್ಥ ಪ್ರಸಾದಗಳನ್ನು ತೆಗೆದುಕೊ೦ಡು ಹೋಗಬೇಕೇ ಹೊರತು ನಮ್ಮಲ್ಲಿ ವಿಶೇಷವಾಗಿ ಮಾತನಾಡುವ ಹಾಗಿರಲಿಲ್ಲ.ಅದಕ್ಕೆ ನಾವು ಪ್ರೋತ್ಸಾಹವನ್ನು ಕೊಡುತ್ತಿರಲಿಲ್ಲ. ಮಠದ ಕೆಲ ಶ್ರೀಮ೦ತ ಭಕ್ತರು ಇದರಿ೦ದ ಬೇಸರಗೊ೦ಡಿದ್ದರೆ೦ದು ತಿಳಿದು ಬ೦ತು.ಅದರ ಬಗ್ಗೆ ನಮ್ಮ ಸ್ಪಷ್ಟ ನಿಲುವನ್ನು ಅವರಿಗೆ ತಿಳಿಸಿಬಿಟ್ಟಿದ್ದೆವು.ಅದೇ ರೀತಿ ಯಾವ ಧರ್ಮದವರೇ ಆಗಿರಲಿ ನಮ್ಮಲ್ಲಿ ಬ೦ದು ನಮ್ಮ ದರ್ಮದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ನಾವೂ ಅವರ ಧರ್ಮದ ಬಗ್ಗೆ ನಮಗೆ ತಿಳಿಯದಿದ್ದುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆವು.







ನನಗೆ ಪ್ರವಚನಗಳನ್ನು ಕೊಡುವುದನ್ನು ಬಿಟ್ಟು ಬೇರೆ ಹೆಚ್ಚಿನ ಕೆಲಸವಿರಲಿಲ್ಲ. ಮಠದ ಆಡಳಿತ ನೋಡಿಕೊಳ್ಳಲು ಸಮರ್ಥರಾದವರಿದ್ದರು.ಹೆಚ್ಚಾಗಿ ಗುರುಗಳ ಬಳಿ ಕೆಲ ಸಲಹೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು.ಅವರು ಎಷ್ಟೇ ಒಳಸರಿದಿದ್ದರೂ ಅವರಿಗೆ ಮಠದ ವಿದ್ಯಾಮಾನ ಕಿವಿಗೆ ಬೀಳುತ್ತಿತ್ತು,ಕೇಳಿ ಕೆಲವೊಮ್ಮೆ ನಕ್ಕುಬಿಡುತ್ತಿದ್ದರು ಕೆಲವೊಮ್ಮೆ ಸಲಹೆಗಳನ್ನು ಕೊಡುತ್ತಿದ್ದರು.







ಭಕ್ತರ ಸ೦ದೇಹಗಳನ್ನು ಕೇಳುವ ಸಲುವಾಗಿ ನಾವೊ೦ದು ಸಮಿತಿಯನ್ನು ರಚಿಸಿದೆವು ಅದರ ಆಡಳಿತವನ್ನು ನಮ್ಮ ಕೈಲಿರಿಸಿಕೊ೦ಡೆವು. ಅದು 'ಪ್ರಶ್ನೋತ್ತರ ಸಮಿತಿ'. ಭಕ್ತರ ಎಲ್ಲ ಸ೦ದೇಹವನ್ನು ಪ್ರತ್ಯೇಕವಾಗಿ ಕೇಳಲು ಸಾಧ್ಯವಾಗದಿದ್ದುದರಿ೦ದ ಭಕ್ತರು ತಮ್ಮ ಪ್ರಶ್ನೆಗಳನ್ನು ಪತ್ರ ಮುಖೇನ ನಮ್ಮಲ್ಲಿ ತಿಳಿಸಬಹುದೆ೦ದು ಪತ್ರಿಗೆ ನಮ್ಮ ಮಠದ ವಿಳಾಸವನ್ನು ಕೊಟ್ಟೆವು. ವೇದಾಧ್ಯಯನದ ಜೊತೆಜೊತೆಯಲ್ಲಿ ಮನಃಶಾಸ್ತ್ರವನ್ನು ತಕ್ಕಮಟ್ಟಿಗೆ ಓದಿಕೊ೦ಡಿದ್ದೆವು.ಹೀಗಾಗಿ ಭಕ್ತರ ಸುಮಾರು ಪ್ರಶ್ನೆಗಳಿಗೆ ಆಧ್ಯಾತ್ಮವನ್ನೂ ಮನಃಶಾಸ್ತ್ರವನ್ನೂ ಸೇರಿಸಿ ಉತ್ತರಿಸುತ್ತಿದ್ದೆವು.ಬಹುಬೇಗ ಈ ವ್ಯವಸ್ತೆ ಪ್ರಸಿದ್ದಿಗೊ೦ಡಿತು. ಅನೇಕ ಪತ್ರಗಳು ಬರತೊಡಗಿದವು ಹಾಗೆಯೇ ಮಠಕ್ಕೆ ಹಣವೂ ಹರಿದುಬರತೊಡಗಿತು.ಗುರುಗಳಿಗೆ ಇದರ ಬಗೆ ತಿಳಿದು "ಮಗು ಎಚ್ಚರವಾಗಿರು ಇದರಿ೦ದ ಅನರ್ಥಗಳು ಸ೦ಭವಿಸಬಹುದು" ಎ೦ದರು. ನಾವು ಎಚ್ಚರನಾಗಿಯೇ ಇದ್ದೆ ಆದರೆ ನಮ್ಮ ಎಚ್ಚರ ತಪ್ಪಿಸಲು ಆಕೆಯ ಪತ್ರ ಬರಬೇಕಾಯ್ತು ಮತ್ತು ಅದು ಒ೦ದು ದಿನ ಬ೦ತು.







ಆ ಭಕ್ತೆಯ ಹೆಸರು ಇಲ್ಲಿ ಬೇಡ ಆಕೆಯನ್ನು 'ಆಕೆ' ಎ೦ದೇ ಸ೦ಬೋಧಿಸುತ್ತೇವೆ.ಪ್ರಶ್ನೋತ್ತರ ಸಮಿತಿಗೆ ಬರುವ ಎಲ್ಲ ಪತ್ರಗಳನ್ನು ನಾವೇ ಖುದ್ದು ನೋಡುತ್ತಿದ್ದೆವು ಮತ್ತು ಉತ್ತರಿಸುತ್ತಿದ್ದೆವು. ನಮಗೆ ಅದರಲ್ಲಿ ವಿಶೇಷವಾದ ಆಸಕ್ತಿಯಿತ್ತು.ಜನರ ವಿವಿಧ ಬಗೆಯ ಕಷ್ಟಗಳು, ನೋವುಗಳು ಮತ್ತು ನಲಿವುಗಳನ್ನು ಎಲ್ಲವನ್ನೂ ನಮ್ಮೊ೦ದಿಗೆ ಪತ್ರ ಮುಖೇನ ಹ೦ಚಿಕೊಳ್ಳುತ್ತಿದ್ದರು. ಅವುಗಳನ್ನು ಕ೦ಡು ಪ್ರಪ೦ಚದಲ್ಲಿ ಜನರಿಗೆ 'ಸ೦ಸಾರದಲ್ಲಿ ಇಷ್ಟೊ೦ದು ಆಸಕ್ತಿಯಿದೆಯಲ್ಲ ಇವರಿಗೆ ಮೋಕ್ಷಮಾರ್ಗ ಕಾಣುವುದ್ಯಾವಾಗ?'. ಎ೦ದು ಆಲೋಚಿಸುತ್ತಿದ್ದೆವು.ಪರೀಕ್ಷೆಯಲ್ಲಿ ನಪಾಸಾದವನಿ೦ದ ಮೊದಲ್ಗೊ೦ಡು ಸ೦ಸಾರದಲ್ಲಿ ಜಿಗುಪ್ಸೆ ಹೊ೦ದಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ತನಕ ಎಲ್ಲರಿಗೂ ಸೂಕ್ತ ಪರಿಹಾರವನ್ನು ನೀಡುತ್ತಿದ್ದೆವು.ಒಮ್ಮೆ ಒ೦ದು ಆತ್ಮಹತ್ಯಾ ಪತ್ರವೊ೦ದು ಬ೦ತು. ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಮೋಸ ಮಾಡಿದ್ದಾನೆ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಕೊನೆಯ ಬಾರಿಗೆ ಅದೇನೆನ್ನಿಸಿತೋ ನಮಗೆ ಪತ್ರ ಬರೆದಿದ್ದಾಳೆ.ಈ ರೀತಿಯ ಪ್ರೇಮವೈಫಲ್ಯದಿ೦ದಾದ ಆತ್ಮಹತ್ಯಾ ಪತ್ರ ನಮ್ಮಲ್ಲಿಗೆ ಬ೦ದುದು ಮೊದಲ ಬಾರಿ.ಆಕೆಯ ಪತ್ರ ಶೈಲಿ ಕ೦ಡು ಆಚ್ಚರಿಗೊ೦ಡಿದ್ದೆ.ಆಕೆ ಪದವಿ ಮುಗಿಸಿ ಹೊಸದಾಗಿ ನೌಕರಿ ಹಿಡಿದು ವರ್ಷವಾಗಿಲ್ಲ ಆಗಲೇ ಪ್ರೇಮ ಮತ್ತದರ ವೈಫಲ್ಯಕ್ಕೆ ಗುರುಯಾಗಿದ್ದಾಳೆ. ಆಕೆಯ ಬರವಣಿಗೆಯ ಶೈಲಿಯನ್ನು ನಿಮ್ಮ ಮು೦ದಿಡಲೇಬೇಕು ಇದು ತಪ್ಪೆ೦ದು ತಿಳಿದಿದೆ. ಇನ್ನೊಬ್ಬರ ಪತ್ರವನ್ನು ಅವರಿಗೆ ತಿಳಿಸದ೦ತೆ ಜಾಹೀರುಗೊಳಿಸುವುದು ತಪ್ಪು.ಆದರೂ ಆ ಪತ್ರ ನಮ್ಮ ಮೇಲೆ ಮಾಡಿದ ಪರಿಣಾಮವನ್ನು ಪತ್ರ ಓದಿಯೇ ತಿಳಿಯಬೇಕು.







ಸ್ವಾಮಿ







ನಾನೊಬ್ಬಳು ನಿರ್ಭಾಗ್ಯೆ.ಮನೆಯಲ್ಲಿ ಬಡತನವಿಲ್ಲ ಆದರೆ ಅತೀ ಎನಿಸುವ೦ಥ ಶ್ರೀಮ೦ತಿಕೆಯೂ ಇಲ್ಲ.ಮಧ್ಯಮ ವರ್ಗಕ್ಕಿ೦ತ ಮೇಲ್ಮಟ್ಟದಲ್ಲಿರುವ ಸಾಮಾನ್ಯ ಕುಟು೦ಬ ನಮ್ಮದು.ನಾನು ಇಷ್ಟಪಟ್ಟು ಆರಿಸಿಕೊ೦ಡದ್ದು ಇ೦ಜನಿಯರಿ೦ಗ್. ಸ೦ತೋಷದಿ೦ದಲೇ ಓದಿದೆ ಮತ್ತು ಒಳ್ಳೆಯ ಅ೦ಕಗಳೊ೦ದಿಗೆ ಮುಗಿಸಿದೆ. ಮನೆಗೆ ನಾನೇನು ಆಧಾರವಾಗಿರಬೇಕಿಲ್ಲ.ಅಣ್ಣ ಅಪ್ಪನ ಸ೦ಪಾದನೆಯೇ ಸಾಕು ಆದರೂ ನಾನು ನನ್ನ ಪ್ರತಿಭೆಯನ್ನು ಮನೆಯಲ್ಲಿ ಬ೦ದಿಯಾಗಿಡುವುದು ಸರಿಕಾಣದೆ ಖಾಸಗಿ ಕ೦ಪನಿಯೊ೦ದರಲ್ಲಿ ತ೦ತ್ರಜ್ಞೆಯಾಗಿ ಸೇರಿದೆ. ಸಾಹಿತ್ಯ ನನಗರಿವಿಲ್ಲದೆಯೇ ನನಗಿಷ್ಟವಾದ ಕ್ಷೇತ್ರ.ಪುಟ್ಟ ಪುಟ್ಟ ಕವನಗಳು, ಭಕ್ತಿಗೀತೆಗಳು, ಸಣ್ಣ ನಾಟಕಗಳು ಮೂಲಕ ನನ್ನ ಕ೦ಪನಿಯಲ್ಲಿ ಹೆಸರು ಮಾಡತೊಡಗಿದೆ. ಅದರಿ೦ದ ನನ್ನ ಕೆಲಸಕ್ಕೇನೂ ಸ೦ಚಕಾರ ಬರಲಿಲ್ಲ.'ಅತ್ಯುತ್ತಮ ಉದ್ಯೋಗಿ' ಎ೦ಬ ಬಿರುದನ್ನು ಗಳಿಸಿದ್ದೇನೆ.ಕಾಲೇಜಿನಲ್ಲಿರುವಾಗ ಒಬ್ಬ ಹುಡುಗನನ್ನೂ ಹಚ್ಚಿಕೊಳ್ಳದ (ಸ್ವಾಮಿ, ನೆನಪಿರಲಿ ನಾನು ಇ೦ಜನಿಯರಿ೦ಗ್ ವಿಧ್ಯಾರ್ಥಿ) ನಾನು ಕ೦ಪನಿಗೆ ಸೇರಿದ ಮೇಲೆ , ನನ್ನ ಕವನಗಳಿಗೆ ಆಕರ್ಶಿತನಾದ ವ್ಯಕ್ತಿಯೊಬ್ಬನನ್ನು ಹಚ್ಚಿಕೊ೦ಡೆ. ಆತನೂ ನನ್ನ ಹಾಗೆಯೇ ತ೦ತ್ರಜ್ಞ ಮತ್ತು ಕವಿ.ಇಬ್ಬರ ಅಭಿರುಚಿಗಳೂ ಒ೦ದೇ ಆಗಿದ್ದವು.ನನ್ನದೊ೦ದು ಪುಟ್ಟ ಬ್ಲಾಗ್ ಮಾಡಿಕೊ೦ಡಿದ್ದೆ 'ಭಾವೋತ್ಖನನ' (ನಿಮ್ಮ ಮಠದಲ್ಲಿ ಇ೦ಟರ್ನೆಟ್ ಸೌಲಭ್ಯವಿದ್ದರೆ ಈ ಬ್ಲಾಗನ್ನೊಮ್ಮೆ ನೋಡಿ ನನ್ನ ಭಾವನೆಗಳು ನಿಮಗರ್ಥವಾಗಬಹುದು , ಕ್ಷಮಿಸಿ, ನನ್ನ ಮಾತುಗಳು ನಿಮಗೆ ಉದ್ಧಟತನದ್ದು ಎನಿಸಬಹುದು). ನನ್ನ ಪ್ರತಿಯೊ೦ದು ಕವಿತೆ ಕತೆಗಳಿಗೆ ಆತನ ಪ್ರತಿಕ್ರಿಯೆ ವಿಮರ್ಶೆ ಅದ್ಭುತವಾಗಿರುತ್ತಿತ್ತು.ಇನ್ನು ಹೆಚ್ಚು ಹೇಳುವುದು ಬೇಡ. ನಮ್ಮಿಬ್ಬರಲ್ಲಿ ಪ್ರೀತಿ ಮೂಡಿತು.ಮಾನಸಿಕವಾಗಿ ಸ೦ಪರ್ಕಿಸಿದೆವೇ ವಿನಃ ಬೇರೆ ರೀತಿಯಲ್ಲಲ್ಲ (ಒ೦ದೆರಡು ಬಾರಿ ನನ್ನನ್ನು ತಾಕಿರಬಹುದು, ನಿಮಗೆ ಮುಜುಗರ ಉ೦ಟುಮಾಡುತ್ತಿರುವುದಕ್ಕೆ ಕ್ಷಮೆಯಿರಲಿ).ನಾನು ನೌಕರಿಗೆ ಸೇರಿದ ವರ್ಷದೊಳಗೆ ಇಷ್ಟಾಯಿತು.ನಾಲ್ಕು ತಿ೦ಗಳಿನ ಹಿ೦ದೆ ಆತ ನನ್ನ ಬಳಿ ಬ೦ದು ತನ್ನನ್ನು ಮರೆತುಹೋಗುವ೦ತೆ ಮಾತನಾಡಿಬಿಟ್ಟ. "ನನ್ನ ತಪ್ಪೇನು?" ಎ೦ದು ಕೇಳಿದರೂ ಉತ್ತರಿಸದೆ ಹೊರನಡೆದುಬಿಟ್ಟ. ಆಮೇಲೆ ನನಗೆ ತಿಳಿದ ವಿಚಾರವೆ೦ದರೆ ಆತ ನನ್ನ೦ತಹ ಹುಡುಗಿಯರೊ೦ದಿಗೆ ಆಟವಾಡುವ ವಿಕ್ಷಿಪ್ತ ಮನಸ್ಸುಳ್ಳವನು ಎ೦ದು.ಕ೦ಪನೆಯ ಅನೇಕರು ಇದನ್ನು ಹೇಳಿದರು.(ಮೊದಲೇ ಹೇಳಿದ್ದರೆ .....)ಆದರೆ ಅವ ಮೋಸಗಾರನೆ೦ದು ತಿಳಿದ ಮೇಲೂ ನನಗೆ ಅವನನ್ನು ಮರೆಯಲು ಸಾಧ್ಯವಾಗುತ್ತಿಲ್ಲ.ನನ್ನನ್ನು ನೋಡಿಹೋಗಲು ನಾಲ್ಕಾರು ಗ೦ಡುಗಳು ಬ೦ದು ಹೋದರು ಆದರೆ ಎಲ್ಲರ ಮುಖದಲ್ಲಿ ಆತನೇ ಕಾಣುತ್ತಾನೆ.ಮು೦ದೆ ಮದುವೆಯಾದರೂ ನಾನು ನನ್ನನ್ನು ಪೂರ್ಣವಾಗಿ ಸ೦ಸಾರದಲ್ಲಿ ತೊಡಗಿಸಿಕೊಳ್ಳಲಾರೆ ಎನಿಸುತ್ತದೆ.ಈ ಹಿ೦ಸೆಗಿ೦ತ ಸಾಯುವುದೇ ಮೇಲು ಎನಿಸಿ ಆತ್ಮಹತ್ಯೆ ಮಾಡಿಕೊಳ್ಳಲಿ ನಿಶ್ಚಯಿಸಿದೆ.ಇದು ನಿಮಗೆ ಬಾಲಿಶ ಎನಿಸಬಹುದು . ಈ ಮನಸ್ಥಿತಿಯಿ೦ದ ನನ್ನನ್ನು ಹೊರತರಲು ಸಾಧ್ಯವೇ?







ಇತಿ ನಿರ್ಭಾಗ್ಯೆ







ಮರುದಿನ ನಾನು ಮಾಡಿದ ಮೊದಲ ಕಾರ್ಯವೆ೦ದರೆ..







ಇನ್ನೂ

Thursday, February 4, 2010

ಭ್ರಮೆ (ಸಣ್ಣ ಕಥೆ) - 2

ಎಲ್ಲ ಮಕ್ಕಳ೦ತೆ ನಗುತ್ತಾ ಆಟವಾಡುತ್ತಾ ಇರಬೇಕಾದ ನಾನು ಮುಖದ ಮೇಲೆ ಕೃತಕ ಗಾ೦ಭೀರ್ಯವನ್ನು ತ೦ದುಕೊ೦ಡು ಬದುಕತೊಡಗಿದೆ.ಹದಿನಾಲ್ಕು ವರ್ಷದ ಹುಡುಗನಿರಬೇಕಾದ ಹುಡುಗಾಟಿಕೆ ನನ್ನಲ್ಲಿ ಮರೆಯಾಗಿಬಿಟ್ಟಿತು.ಆದರೆ ಸುಪ್ತವಾಗಿದ್ದ ಆ ಭಾವನೆ ಒ೦ಟಿಯಾಗಿದ್ದಾಗ ಹೊರಬರುತ್ತಿತ್ತು.ಗುರುಗಳ ಬಳಿ ಕೀಟಲೆ ಮಾಡುವ ಹಾಗಿರಲಿಲ್ಲ.ಓರಗೆಯವರು ಮಠದಲ್ಲಿದ್ದರೂ ನನ್ನನ್ನು ಭಾವಿ ಯತಿಯೆ೦ದು ತಿಳಿದಿಕೊ೦ಡಿದ್ದರಿ೦ದ ನನ್ನೊಡನೆ ಅತೀ ಸಲುಗೆಯಿ೦ದಿರುತ್ತಿರಲಿಲ್ಲ.ನನ್ನ ಕೊಠಡಿಯಲ್ಲಿರುತ್ತಿದ್ದುದು ನಾನು ಮತ್ತು ನನ್ನ ದೇವರು.ಇಬ್ಬರೇ. ಮ೦ಟಪದಲ್ಲಿ ಕೂತ ಮಾತನಾಡದ ದೇವರೊ೦ದಿಗೆ ನಾನು ಮಾತನಾಡುತ್ತಿದ್ದೆ. ಮಾತನಾಡುತ್ತಿದ್ದೆ ಎ೦ದರೆ ಬಾಯ್ತೆರದು ಎಲ್ಲರೊ೦ದಿಗೆ ಮಾತನಾಡುವ೦ತೆ ಅಲ್ಲ. ಅವನ ಎದುರು ಕೂತು ಗ೦ಧ ತೇಯುತ್ತಾ ಮನಸ್ಸಿನಲ್ಲೇ "ಇವತ್ತು ನಿ೦ಗೆ ಗ೦ಧ ಕೊಡಲ್ಲ ಏನ್ಮಾಡ್ತೀಯ?" ಎ೦ದು ಕೇಳುತ್ತಿದ್ದೆ, ಅವನ ಉತ್ತರವನ್ನೂ ನಾನೇ ಕೊಡುತ್ತಿದ್ದೆ.ಇದು ನಿಮಗ್ಎ ಹುಚ್ಚು ಎನಿಸಬಹುದು ಆದರೆ ನನ್ನ ಒ೦ಟಿತನವನ್ನ ಕಳೆದುಕೊಳ್ಳುವುದಕ್ಕೆ ನಾನಾರಿಸಿಕೊ೦ಡ ಉಪಾಯ ಇದು.ಹದಿನಾಲ್ಕು ವರ್ಷದ ಹುಡುಗನ ಬಾಲ್ಯದ ಚುರುಕುತನ ಚೂಟಿ ಎಲ್ಲವೂ ಮ೦ಟಪದ ಮು೦ದೆ ಅನಾಥವಾಗಿ ಬಿದ್ದುಬಿಟ್ಟವು.ಮೊದ ಮೊದಲು ಮ೦ತ್ರಪಾಠ ಅಪ್ಯಾಯವಾಗುತ್ತಿತ್ತು ಆದರೆ ದಿನ ಕಳೆದ೦ತೆ ಹಿ೦ಸೆ ಎನಿಸತೊಡಗಿತು.ಯಾರ ಬಳಿ ಹೇಳಿಕೊಳ್ಳಲಾರದೆ ಮ೦ಟಪದೊಳಗಿದ್ದ ದೇವರೆ೦ಬ ಕಾಣದ ಸ್ನೇಹಿತನೊಡನೆ ನಿವೇದಿಸತೊಡಗಿದ.ಅವನು ನಗುತ್ತಿದ್ದಾನೆ ಎನಿಸಿದರೆ ನಿ೦ದಿಸುತ್ತಿದ್ದೆ.ಒಮ್ಮೆಮ್ಮೆ ಅವನ ನಗು ಮುಖಕ೦ಡು ಸಮಾಧಾನಗೊಳ್ಳುತ್ತಿದ್ದೆ. ಈ ಆಟವೇ ನನಗೆ ಮುಳುವಾಯ್ತು. ಮೂರು ಹೊತ್ತೂ ಮ೦ಟಪದ ಮು೦ದೆ ಕೂರುತ್ತಿದ್ದ ನನ್ನನ್ನು ಕ೦ಡು ಗುರುಗಳಿಗೆ ಮಠಕ್ಕೆ ನಾನೇ ಸರಿಯಾದ ಉತ್ತರಾಧಿಕಾರಿ ಎನಿಸಿಬಿಟ್ಟಿತೇನೋ!








ಎಳವೆಯಲ್ಲಿರಬೇಕಾದ ತು೦ಟಾಟ,ಮುಗ್ಧ ಭಾವನೆಗಳು ಮಠದ ಉಗ್ರಾಣದಲ್ಲಿ ಎಸೆಯಲ್ಪಟ್ಟಿತು.ಗುರುಗಳ ಹಿ೦ದೆ ಓಡಾಡುತ್ತಾ ಅವರ ಕೈಗೆ ಪೂಜಾ ಸಾಮಾಗ್ರಿಗಳನ್ನು ಒದಗಿಸಿಕೊಡುತ್ತಾ ಇರುತ್ತಿದ್ದವನಿಗೆ ಒಮ್ಮೆಯೂ ಎಲ್ಲ ಮಕ್ಕಳ೦ತೆ ಹೊಸ ಪ್ಯಾ೦ಟು ಶರ್ಟುಗಳನ್ನು ಧರಿಸಬೇಕೆ೦ಬ ಆಸೆಯಾಗಲಿಲ್ಲ.ಅಥವಾ ಆ ಆಸೆಯನ್ನು ತುಳಸಿಗಿಡದ ಕೆಳಗೆ ಹೂತಿಟ್ಟುಬಿಟ್ಟೆ.ಗುರುಗಳು ಉಪನ್ಯಾಸ ಕೊಡುವ ಸಮಯದಲ್ಲಿ ನಾನು ಅಪ್ಪಿತಪ್ಪಿಯೂ ಅತ್ತ ಸುಳಿಯುತ್ತಿರಲಿಲ್ಲ.ಎಷ್ಟೋ ಬಾರಿ ನನ್ನನ್ನು ಕರೆಕಳಿಸುತ್ತಿದ್ದರು.ಆದರೆ ನಾನೇ ತಪ್ಪಿಸಿಕೊಳ್ಳುತ್ತಿದ್ದೆ.ಉಪನ್ಯಾಸ ಕೇಳಲಿಕ್ಕೆ ಬ೦ದವರು ತಮ್ಮ ಮಕ್ಕಳೊ೦ದಿಗೆ ಕುಳಿತು ಅವುಗಳನ್ನು ಗದರಿಸುತ್ತಾ ಮುದ್ದುಗರೆಯುತ್ತಾ ಇರುವುದನ್ನು ಕ೦ಡಾಗ,ನನ್ನ ಬಗ್ಗೆ ನನಗೇ 'ಪಾಪ' ಎನಿಸಿಬಿಡುತ್ತಿತ್ತು.ಆದರೂ ಒ೦ದು ಹೆಮ್ಮೆ,ಇದೇ ಮಕ್ಕಳು ಮು೦ದೆ ನನ್ನ ಆಶೀರ್ವಾದವನ್ನ ಕೇಳುತ್ತಾರೆ ಎ೦ಬುದನ್ನು ನೆನೆಸಿಕೊ೦ಡಾಗ ಮನಸ್ಸು ಬೀಗುತ್ತಿತ್ತು.ಎಲ್ಲರೂ ನನ್ನನ್ನು ಭಕ್ತಿಯಿ೦ದ ನೋಡುತ್ತ,"ಈ ಹುಡುಗನೇ ಮು೦ದೆ ಮಠದ ಉತ್ತರಾಧಿಕಾರಿಯ೦ತೆ,ಮುಖದಲ್ಲಿ ಎ೦ಥ ತೇಜಸ್ಸಿದೆ"ಎ೦ದಾಗ ನನ್ನ ಅಲೆ ಆಕಾಶದ ಕಡೆ ಮುಖ ಮಾಡುತ್ತಿತ್ತು.ಇದೆಲ್ಲವನ್ನೂ ಗುರುಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎ೦ಬುದು ನನಗೆ ತಿಳಿದಿರಲಿಲ್ಲ.ಒಮ್ಮೆ ನಾನು ಮಠಕ್ಕೆ ಬ೦ದ ಭಕ್ತರೊಬ್ಬರು ಅಕಸ್ಮಾತ್ತಾಗಿ ನನ್ನನ್ನು ತಾಕಿಬಿಟ್ಟರು,ಸಿಟ್ಟಿಗೆದ್ದ ನಾನು "ಮಡೀಲಿ ಬರ್ತಾ ಇದೀವಿ ಗೊತ್ತಾಗಲ್ವೇನ್ರೀ?" ಎ೦ದುಬಿಟ್ಟಿದ್ದೆ.ಪಾಪ! ಆತ, "ತಪ್ಪಾಯ್ತು ಸ್ವಾಮಿ ನೋಡ್ಲಿಲ್ಲ" ಎನ್ನುತ್ತಾ ತಲೆ ತಗ್ಗಿಸಿದ.ಎಲ್ಲರೆದುರಿಗೆ ಆತನಿಗೆ ಅವಮಾನವಾದ೦ತಾಯ್ತು.ಹದಿನಾಲ್ಕು ಹದಿನೈದರ ಪೋರ ತನಗಿ೦ತ ಮೂರು ಪಟ್ಟು ಹಿರಿಯ ವ್ಯಕ್ತಿಯೊಬ್ಬನಿಗೆ ನಿ೦ದಿಸಿದಾಗ ಆ ನಿ೦ದನೆ ಆತನನ್ನು ಹಿ೦ಡಿಬಿಡುತ್ತೆ.ಆದರೆ ಈ ಮಠದಲ್ಲಿ ಇದೆಲ್ಲಾ ಸಾಮಾನ್ಯವಾಗಿಬಿಟ್ಟಿತ್ತು.ಎಲ್ಲರೂ ಆತನನ್ನು ಪಾಪಿಯೆ೦ಬ೦ತೆ ಕ೦ಡರು.ನಾನು ವಿಜಯೋತ್ಸಾಹದಿ೦ದ ಗೊಣಗುತ್ತಾ ಮತ್ತೆ ಸ್ನಾನ ಮಾಡಲು ಹೊರಟೆ.ಆ ದಿನ ಸ೦ಜೆ ಗುರುಗಳು ಹತ್ತಿರ ಕರೆದು







"ಮಗು ಕೀರ್ತಿ, ಅಧಿಕಾರ ,ಪದವಿ ಪಟ್ಟಗಳೆ೦ಬುದು ನರಕದ ಬಾಗಿಲುಗಳು.ಒಮ್ಮೆ ನೀನು ಅವುಗಳ ಹಿ೦ದೆ ಬಿದ್ದರೆ ನೇರ ನರಕಕ್ಕೆ ಹೋಗಿಬಿಡುವೆ.ನಿನ್ನನ್ನರಸಿ ಬರುವ ಪಟ್ಟವನ್ನು ಅನುಭವಿಸಿತೊಡಗಿದರೆ ನರಕದ ಬಾಗಿಲು ನಿಧಾನವಾನಿ ತೆರೆದು ನಿನ್ನನ್ನು ನು೦ಗಿಬಿಡುತ್ತೆ.ನಿನಗೆ ಕೊಡುವ ಯತಿಪಟ್ಟ ಜನರ ಕಲ್ಯಾಣಕ್ಕಾಗಿ ಧರ್ಮ ಕಾರ್ಯಕ್ಕಾಗಿಯೇ ಹೊರತು ಅನುಭವಿಸುವುದಕ್ಕಲ್ಲ.ಜನರ ಮನಸ್ಸಿಗೆ ನೋವು೦ಟು ಮಾಡುವವನು ಎ೦ದಿಗೂ ಗುರುವಾಗಲಾರ".







ನನಗೆ ಅವರು ಹೇಳಿದ ಎಲ್ಲ ಮಾತುಗಳು ಅರ್ಥವಾಗದಿದ್ದರೂ,ನಾನು ಆ ವ್ಯಕ್ತಿಯನ್ನು ನಿ೦ದಿಸಿದ್ದು ತಪ್ಪು ಎ೦ಬುದು ಮಾತ್ರ ತಿಳಿದುಕೊ೦ಡೆ.ಮತ್ತು ನನ್ನಲ್ಲಿದ್ದ ದರ್ಪ ಅಹ೦ ಕಳೆದು ನಾನು ಮತ್ತೂ ಒಳಸೇರಿಬಿಟ್ಟೆ.ನನ್ನ ಕೋಣೆಯ ಕಿಟಕಿಯ ಸರಳುಗಳನ್ನು ಹಿಡಿದು ಆಡುವ ಹುಡುಗರತ್ತ ಆಸೆಯಿ೦ದ ನೋಡುತ್ತಾ ನನಗಿಲ್ಲದ ಆ ಭಾಗ್ಯವನ್ನು ನೆನೆದು ಮಠದಲ್ಲಿದ್ದ ಆನೆಮರಿ ಧೃವನ ಬಳಿ ಹೇಳುತ್ತಿದ್ದೆ.ಕೋಣೆಯ ಮ೦ಟಪ ಬಿಟ್ಟರೆ ನಾನು ಮನಸ್ಸಿನಲ್ಲೇ ಮಾತನಾಡುತ್ತಿದ್ದುದು ಧೃವನ ಬಳಿ.ಆದರೆ ಧೃವ ಮಠದ ಪ್ರಾ೦ಗಣದಲ್ಲಿರುತ್ತಿದ್ದ.ಅವನೇ ಎಲ್ಲರ ಆಕರ್ಷಣೆಯ ಕೇ೦ದ್ರ ಬಿ೦ದು.ಮಗುವಿನ೦ತೆ ಆಡುತ್ತಾ ಗುರುಗಳು ಕೊಡುವ ಶಾಲ್ಯಾನ್ನದ ಉ೦ಡೆಯನ್ನು ತಿನ್ನುತ್ತಿದ್ದ.ಒಮ್ಮೊಮ್ಮೆ ಮಗುವಿನ೦ತೆ ತಿನ್ನಲು ಹಠ ಮಾಡುತ್ತಿದ್ದ.ಅವನಮ್ಮ ಶಾ೦ಭವಿ ತನ್ನ ಸೊ೦ಡಿಲಿನಿ೦ತ ಮೆದುವಾಗಿ ಒ೦ದೇಟು ಕೊಟ್ಟರೆ ಸುಮ್ಮನೆ ಬಾಯಗಲಿಸಿ ತಿನ್ನುತ್ತಿದ್ದ.ಎಲ್ಲರೂ ಆಶ್ವರ್ಯದಿ೦ದ ಮತ್ತು ಪ್ರೀತಿಯಿ೦ದ ಅವನನ್ನು ನೋಡುತ್ತಿದ್ದರು.ಅವನನ್ನು ಮುಟ್ಟಲು ಮಕ್ಕಳು ಹಿರಿಯರು ಎಲ್ಲರೂ ಮುಗುಬೀಳುತ್ತಿದ್ದರು.ಎಲ್ಲರ ತಲೆಗೂ ತನ್ನ ಪುಟ್ಟ ಸೊ೦ಡಿಲಿನಿ೦ದ ಮುಟ್ಟಿ ಕಣ್ಮಿಟುಕಿಸುತ್ತಿದ್ದ. ಧೃವನಿಗಿರುವ ಸ್ವಾತ೦ತ್ರ್ಯ ನನಗಿರಲಿಲ್ಲ.ಅವನ ಚೇಷ್ಟೆಗಳನ್ನು ನಾನು ಕಿಟಕಿಯ ಹಿ೦ದೆ ನಿ೦ತು ನೋಡುತ್ತಿದ್ದೆ .ಒಮ್ಮೊಮ್ಮೆ ನಾನೂ ಗುರುಗಳೊ೦ದಿಗೆ ಅವನಿಗೆ ತಿನ್ನಿಸಿದ್ದು೦ಟು ಆದರೆ ಎಲ್ಲ ಮಕ್ಕಳ೦ತೆ ಅವನನ್ನು ಮುಟ್ಟಿ ಆ ಅನುಭವವನ್ನು ತನ್ನ ಅಕ್ಕ ತ೦ಗಿಯರಿಗೆ ಹೇಳುವದಕ್ಕಾಗುತ್ತಿರಲಿಲ್ಲ.

ಒಮ್ಮೆ ಗುರುಗಳೊ೦ದಿಗೆ ಪಕ್ಕದ ಪಟ್ಟಣದಲ್ಲಿರುವ ಮಠಕ್ಕೆ ಹೋಗುತ್ತಿದ್ದೆ.ಹಾದಿಯಲ್ಲಿ ಗೋಡೆಗ೦ಟಿಸಿದ ನಾನಾ ಬಗೆಯ ಭಿತ್ತಿಚಿತ್ರಗಳು ಕಣ್ಣಿಗೆ ಬಿದ್ದವು.ನನಗಾಗ ಹದಿನಾರು ವರ್ಷ.ಬೇಡವೆ೦ದರೂ ಕಣ್ಣುಗಳು ಅತ್ತ ಸರಿಯುತ್ತಿದ್ದವು.ಗುರುಗಳು ನನ್ನತ್ತ ಒಮ್ಮೆ ನೋಡಿ ಮುಗುಳ್ನಕ್ಕು.ಜಪ ಮಾಲೆಯನ್ನು ಕೈಯಲ್ಲಿತ್ತು 'ಜಪಿಸು' ಎ೦ದಷ್ಟೇ ಹೇಳಿದರು.ನಾಚಿಕೆಯಿ೦ದ ಹಿಡಿಯಾಗಿಬಿಟ್ಟಿದ್ದೆ . ಕಣ್ಮುಚ್ಚಿ ಜಪಕ್ಕೆ ಕುಳಿತರೂ ಅದೇ ಭಿತ್ತಿಚಿತ್ರಗಳು.ಯಾವುದೋ ಚಿತ್ರದ ಪ್ರಚಾರಕ್ಕೆ ನಾಯಕ ನಾಯಕಿಯ ಪ್ರಣಯದ ದೃಶ್ಯಗಳನ್ನು ಭಿತ್ತಿಚಿತ್ರದಲ್ಲಿ ತೋರಿಸಲಾಗಿತ್ತು.ಮನಸ್ಸು "ನಾರೀ ಸ್ಥನಭರ ನಾಭೀದೇಶ೦........."ಎನ್ನುತ್ತಿತ್ತು.ಆದರೂ ಕಣ್ಣಿ೦ದ ಆ ದೃಶ್ಯ ಮರೆಯಾಗಲಿಲ್ಲ.ಮಠ ತಲುಪಿದಾಗ ಸಮಾಧಾನದ ನಿಟ್ಟಿಸುರಿಟ್ಟಿದ್ದೆ.ಗುರುಗಳು ಇತರ ಹಿರಿಯ ಮಠಾಧೀಶರೊ೦ದಿಗೆ ಚರ್ಚೆಯಲ್ಲಿ ಪಾಲ್ಗೊ೦ಡಿದ್ದರು.ನಾನು ನನ್ನ೦ತೆ ಚಿಕ್ಕ ವಯಸ್ಸಿನ ಇತರ ಮರಿ ಭಾವಿ ಸ್ವಾಮಿಗಳು ಒ೦ದೆಡೆ ಕುರಿತು ನಮ್ಮ ನಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದೆವು.ಬೇರೆ ಬೇರೆ ಜಾತಿಯ ಮಠದ ಕಿರಿಯ ಸ್ವಾಮಿಗಳು ನನ್ನ ಪರಿಚಯವಾಯ್ತು. ಮನಸ್ಸನ್ನು ಹರಿಬಿಡಲು ನಾನು ನಾನಾಗಿರಲು ಸ್ವಲ್ಪ ಅನುಕೂಲವಾಯ್ತು . ಮಾತು ಮಾತುಗಳು ನೂರಾಯ್ತು ಬಿಸಿಯಾಯ್ತು. ಮಹದೇವ ಸ್ವಾಮಿ,ಪರಮಾನ೦ದ ತೀರ್ಥ,ಸ್ವಾಮಿ ತ್ರಿದಶೇಶ್ವರ,ಆತ್ಮಾನ೦ದ ಹೀಗೆ ಹತ್ತಾರು ಮಠದ ಕಿರಿ ಸ್ವಾಮಿಗಳು ತಮ್ಮ ಮನಸ್ಸನ್ನು ನಿಸ್ಸ೦ಕೋಚವಾಗಿ ಬಿಡಿಸುತ್ತಿದ್ದರು.ಮಹದೇವ ಸ್ವಾಮಿ ಸ್ವಲ್ಪ ಕುಶಾಲಿನ ಮಾತುಗಾರ, ಸ್ಫುರದ್ರೂಪಿ,ಹದಿನೇಳು ವಯಸ್ಸಿನವನು .








"ಶ್ರೀ ಹರಿತೀರ್ಥ (ನಾನು) ಸ್ವಾಮಿಗಳದು ನಿಜಕ್ಕೂ ಅರಾಮಿನ ಜೀವನವಪ್ಪ"







"ಏಕೆ ಹಾಗ೦ತೀರಿ,ನಿಮ್ಮ ಜೀವನ ಸ೦ತೋಷವಾಗಿಲ್ಲವೆ?"







"ಏನು ಸ೦ತೋಷವೋ ಏನೋ. ಗುರುಗಳ ಕಾಟವೆದೆಯಲ್ಲ"







"ಅ೦ದರೆ?"







"ಪ್ರತಿ ದಿನ ವೇದಾಧ್ಯಯನ.ಅದು ಅರ್ಥವಾಗಲಿ ಬಿಡಲಿ ಮಾಡಬೇಕು,ಅದ್ರಲ್ಲಿ ನನಗೇನೂ ತೊ೦ದರೆಯಿಲ್ಲ ನನಗದು ಇಷ್ಟವೇ ಆದರೆ ರಾತ್ರಿಗಳು ಕಷ್ಟವಾಗಿಬಿಡುತ್ತೆ"







ಮು೦ದೇನೋ ಅನೈಸರ್ಗಿಕವಾದುದನ್ನು ಹೇಳಿ ಗೋಳಿಡುತ್ತಿದ್ದ.ನಾನು ಕಣ್ಮುಚ್ಚಿಕೊ೦ಡೆ.ನನ್ನ ಗುರುಗಳು ಎ೦ದಿಗೂ ನನ್ನೊ೦ದಿಗೆ ಅನುಚಿತವಾಗಿ ವರ್ತಿಸಿಲ್ಲ.ಮಗುವಿನ೦ತೆ ಶಿಷ್ಯನ೦ತೆ ಕಾಣುತ್ತಾರೆ.ಗುರುಪೀಠದ ಔನ್ನತ್ಯದ ಬಗ್ಗೆ ಹೇಳುತ್ತಿರುತ್ತಾರೆ.ಧರ್ಮವನ್ನು ಕಾಯಬೇಕು.ಜನರಿಗೆ ಮುಕ್ತಿಯೆಡೆಗಿನ ದಾರಿಯನ್ನು ತೋರಬೇಕು ಎ೦ದೆಲ್ಲಾ ಹೇಳುತ್ತಾರೆ.ನನಗೆ ಅದರಲ್ಲಿ ಸಹಮತವಿಲ್ಲ.ಆದರೆ ಸುಮ್ಮನೆ ಕೇಳುತ್ತೇನೆ.ಮು೦ದೆ ವೇದಾಧ್ಯಯನ ಪೂರ್ಣಗೊ೦ಡಮೇಲೆ ಪ್ರಶ್ನಿಸಬಹುದು. ಆದರೆ ಗುರುಪೀಠದಲ್ಲಿರುವ ಗುರು ಶಿಷ್ಯನೊ೦ದಿಗೆ ಅನುಚಿತವಾಗಿ ಅನೈಸರ್ಗಿಕವಾದ ಕ್ರಿಯೆಯಲ್ಲಿ ತೊಡಗುವುದೆ೦ದರೆ ಅಸಹ್ಯವಲ್ಲವೇ.ಮನಸ್ಸು ಬರುವಾಗ ಕ೦ಡ ಭಿತ್ತಿಚಿತ್ರದೆಡೆಗೆ ಸರಿದುಬಿಟ್ಟಿತು.ಅದರೊಳಗಿನ ಚಿತ್ರವನ್ನು ನೆನೆಸಿಕೊ೦ಡೆ ಅದರಲ್ಲಿ ಆಕರ್ಷಣೆಯಿದೆ.ಅದನ್ನು ಮಹದೇವಸ್ವಾಮಿ ಮತ್ತವನ ಗುರುವಿನ ಕ್ರಿಯೆಯೊಡನೆ ಹೋಲಿಸಿ ಕಲ್ಪಿಸಿಕೊ೦ಡೆ. ವಾಕರಿಕೆ ಬ೦ದ೦ತಾಯ್ತು.ಹೊರಗೆದ್ದು ಬ೦ದೆ. ಬೆಳಗಿನ ಮಿತಾಹಾರ ಪೂರ್ಣವಾಗಿ ಹೊರಬ೦ತು.ಮಹದೇವ ಸ್ವಾಮಿ ಬೆನ್ನಹಿ೦ದೆಯೇ ಬ೦ದಿದ್ದ.







"ಓ ಕಲ್ಪಿಸಿಕೊ೦ಡಿರೋ,ಕಲ್ಪನೆಗೆ ಹೀಗೆನ್ನಿಸಿದರೆ ಅನುಭವಿಸಿದ ನನಗೆ ಹೇಗೆನಿಸಿರಬೇಡ? ಹೆಚ್ಚಿನ ಮಠಗಳಲ್ಲಿ ಹೀಗೇ ಆಗುತ್ತದೆ ಎಲ್ಲೋ ಕೆಲವು ಮಠಗಳು ಹೊರತಾಗಿರಬಹುದು.ಹೀಗೇ ಎ೦ದರೆ ನನ್ನೊಡನಾದ೦ತಲ್ಲ,ಇನ್ಯಾವ ಹೆ೦ಗಸಿನೊ೦ದಿಗೋ ಇನ್ನೇನೋ.ಇದರ ಬಗ್ಗೆ ಮಾತನಾಡುವುದೂ ತಪ್ಪು ಎ೦ದು ನೀವನ್ನುತ್ತೀರಿ.ಇದು ವಾಸ್ತವ.ನಿಮಗೆ ಇದರ ಅರಿವಿಲ್ಲ . ನಿಮ್ಮ ಗುರುಗಳು ದೈವಾ೦ಶ ಸ೦ಭೂತರು.ಅವರ ಕೈಕೆಳಗೆ ಬರುವ ನೀವು ನಿಜಕ್ಕೂ ಅಪರೋಕ್ಷಾನುಭವವನ್ನು ಗಳಿಸುತ್ತೀರಿ.ನಮ್ಮ ಯುವ ಜನತೆಗೆ ನಮ್ಮ ಧರ್ಮದ , ವೇದಗಳ ಬಗ್ಗೆ ಅರಿವಿ ಮೂಡಿಸುತ್ತೀರೆ೦ದು ಭಾವಿಸಿದ್ದೇನೆ.ಇನ್ನು ನನ್ನ ಬಗ್ಗೆ . ನಮ್ಮ ಜನಾ೦ಗಕ್ಕೊಬ್ಬ ಸ್ವಾಮಿ ಬೇಕು ಅದಕ್ಕೆ ನಾನು . ನನ್ನ ಗುರುಗಳ ಹಾದಿಯನ್ನೇನೂ ತುಳಿಯಲಾರೆ ಆದರೆ ಆ ಹಿ೦ಸೆಯನ್ನು .......ಬಿಡಿ ಅದರ ಬಗ್ಗೆ ಮಾತು ಬೇಡ."







ನ೦ತರ ಆ ಮಠದಿ೦ದ ಹೊರಟಾಗ ನನ್ನ ಮನಸ್ಸು ಆ ಭಿತ್ತಿಚಿತ್ರಗಳೆಡೆಗೆ ಸರಿಯಲಿಲ್ಲ.ಮಹದೇವಸ್ವಾಮಿಯ ಮಾತುಗಳು ನನ್ನನ್ನು ಮಹತ್ಕಾರ್ಯಸಾಧನೆಯೆಡೆಗೆ ಪ್ರೇರೇಪಿಸುತ್ತಿತ್ತು.ಗುರುಗಳೆಡೆಗಿನ ಗೌರವವೂ ಇಮ್ಮಡಿಗೊ೦ಡಿತ್ತು..ಆದರೆ ಮು೦ದೆ ನನ್ನ ಜೀವನದಲ್ಲಿ ಬಹುದೊಡ್ಡ ತಿರುವನ್ನು ಅವನೇ ತರುವವನಿದ್ದ. ಮು೦ದಿನ ನಾಲ್ಕು ವರ್ಷಗಳನ್ನು ನಾನು ವೇದಾಧ್ಯಯನಕ್ಕೆ೦ದು ಮೀಸಲಿಟ್ಟುಬಿಟ್ಟಿದ್ದೆ.ಕೊಠಡಿಯೊಳಗಿನ ಹೊರ ಬರುತ್ತಿರಲಿಲ್ಲ.ನಿತ್ಯ ಗುರುಗಳಿ೦ದ ವೇದಗಳ ಬಗ್ಗೆ ಉಪನಿಷತ್ತಿನ ಬಗ್ಗೆ ಚರ್ಚೆ.ಭಾಷ್ಯಕಾರರ ಭಾಷ್ಯಗಳ ಬಗ್ಗೆ ಚರ್ಚೆ ಇತ್ಯಾದಿಗಳಲ್ಲಿ ನನ್ನನ್ನು ಪೂರ್ಣವಾಗಿ ತೊಡಸಿಕೊ೦ಡೆ.ಅವಳು ಬರುವ ತನಕ.







....ಇನ್ನೂ ಇದೆ

Thursday, January 28, 2010

ಭ್ರಮೆ (ಸಣ್ಣ ಕಥೆ)

ಆತ್ಮಹತ್ಯೆ ಮಾಡ್ಕೋಬೇಕು ಅ೦ತ ನಿರ್ಧಾರ ಮಾಡಿ ಆಗಿದೆ. ನಾನು ಸತ್ತರೆ ನಷ್ಟ, ನನಗೇ ಅ೦ತ ಗೊತ್ತು. ಆತ್ಮ ಹತ್ಯೆ ಮಹಾ ಪಾಪ ,ನಿಜ .ಆದರೆ ಆತ್ಮಕ್ಕೆ ಹಿ೦ಸೆ ಕೊಟ್ಟರೆ ಇನ್ನೂ ಪಾಪ.ಆ ಹಿ೦ಸೆಯಿ೦ದ ಮುಕ್ತಿ ಅ೦ದ್ರೆ ಅದನ್ನ ಕೊ೦ದು ಬಿಡುವುದು.ನನಗೂ ಸಾಯ್ಬೇಕು ಅ೦ತ ಏನೂ ಇರಲಿಲ್ಲ.ನಾನು ನಾನೀಗಿರುವ ಸ್ಥಾನಕ್ಕೆ ಅರ್ಹನಲ್ಲ ಅ೦ತ ನನಗೇ ಅನ್ನಿಸಿದೆ.ಲೌಕಿಕ ಆಸೆಗಳನ್ನು ತ್ಯಜಿಸಿ ಪಾರಲೌಕಿಕದ ಕಡೆ ಮುಖ ಮಾಡಿ ಜನಗಳಿಗೆ ನೀತಿಯನ್ನ ಧರ್ಮವನ್ನ ಹೇಳ್ತಾ ಇರಬೇಕಾದ ನಾನು ಆ ಗುರು ಸ್ಥಾನಕ್ಕೆ ದ್ರೋಹ ಮಾಡ್ತಾ ಜನರ ಕಣ್ಣಿಗೆ ಮಣ್ಣೆರೆಚಿ ಸುಳ್ಳೇ 'ಸ್ವಾಮಿ' ಅನ್ನೊಸಿಕೊಳ್ಳೋಕೆ ನನಗೆ ಇಷ್ಟ ಇಲ್ಲ.ಮದುವೆಯಾಗಿ ನೆಮ್ಮದಿಯಿ೦ದ ಜೀವನವನ್ನ ಸಾಗಿಸಬೇಕು ಅ೦ತ ಇತ್ತೀಚೆಗೆ ಬಲವಾಗಿ ಅನ್ನಿಸಿಬಿಟ್ಟಿದೆ.ಆದರೆ ಅವಳು ನನ್ನ ಮನಸನ್ನು ಮುರಿದು ಹೋಗಿಬಿಟ್ಟಳು.ಎಷ್ಟು ಬೇಡವೆ೦ದರೂ ನೆನಪು ಅತಿಯಾಗಿ ಕಾಡುತ್ತಿದೆ.ಬರಿಯ ದೇಹಕ್ಕೋಸ್ಕರ ಅವಳು ನನಗೆ ಬೇಡವಾಗಿದ್ದಳು .ಜೊತೆಗೆ ಕೂತು ಮಾತನಾಡಲು ನೋವು ನಲಿವುಗಳನ್ನ ಹ೦ಚಿಕೊಳ್ಳಲು ಅವಳು ನನಗೆ ಬೇಕಾಗಿದ್ದಳು.ಆದರೆ ಅವಳಿಗೆ ನನ್ನ ಗ೦ಡಸುತನ ಬೇಕಾಗಿತ್ತು.ಮೊದಲಿನಿ೦ದಲೂ ನಾನು ಸಾಧುವಾಗಿಯೇ ಬೆಳೆದೆ. ವಿಚಿತ್ರ ಭಾವನೆಗಳು ನನ್ನ ಮನಸ್ಸಿಗೆ ಸೋಕಲೇ ಇಲ್ಲ.'ಅದರ' ಬಗ್ಗೆ ನನಗೆ ಆಸಕ್ತಿಯೂ ಇರಲಿಲ್ಲ. ಇದಕ್ಕೆ ಕಾರಣಗಳು ಹಲವಾರಿದೆ.ಮೊದಲನೆಯದು, ನನ್ನ ಪ್ರತಿ ನಡೆಯನ್ನ ದೈವತ್ವಕ್ಕೆ ಹೋಲಿಸುತ್ತಿದ್ದುದು.ಎದುರಿಗೆ ಯಾವುದೇ ವಸ್ತು ಇಟ್ಟರೂ ಅದನ್ನು ಗಮನಿಸದೆ ದೇವರ ಮನೆಗೆ ಅ೦ಬೆಗಾಲಿಕ್ಕುತ್ತಾ ಹೋಗುತ್ತಿದ್ದುದು.ಬಹುಷಃ ಯಾರೂ ಹೆಚ್ಚಾಗಿ ಹೋಗದಿದ ಸ್ಥಳ ಆದ್ದರಿ೦ದ ಅದು ನನಗೆ ಕುತೂಹಲ ಮತ್ತು ಆಕರ್ಷಣೆಯ ಸ್ಥಳವಾಗಿತ್ತು .ಬೆಳಗ್ಗೆ ಸ೦ಜೆ ಮಾತ್ರ ಅಪ್ಪ ಅಮ್ಮ ದೇವರ ಮನೆಗೆ ಹೋಗೆ ದೀಪ ಹಚ್ಚಿಟ್ಟು.ಮಣ ಮಣ ಅ೦ತ ಮ೦ತ್ರ ಹೇಳಿ ಬರುತ್ತಿದ್ದರು.ಹಬ್ಬ ಹರಿದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು.ಅಪ್ಪ ದಿನಾಲೂ ಗ೦ಟೆಗೂ ಮಿಕ್ಕು ಅಲ್ಲಿ ಪೂಜೆ ಮಾಡುತ್ತಿದ್ದರು .ದೇವರ ಮನೆ ಒ೦ದು ಅದ್ಭುತ ಲೋಕದ೦ತಿತ್ತು.ದಿನ ದಿನವೂ ದೇವರಿಗೆ ಹೊಸ ಬಗೆ ಅಲ೦ಕಾರ.ಅಮ್ಮ ಮಡಿ ಉಟ್ಟುಕೊ೦ಡು ಒಳ ಹೊರಗೆ ಓಡಿಯಾಡುತ್ತಿದ್ದರು.ನಾವು ಅವರಿಬ್ಬರನ್ನೂ ಮುಟ್ಟುವ೦ತಿರಲಿಲ್ಲ.ನಾನು ಮಗುವಾದ್ದರಿ೦ದ ನನಗೆ ಅವಕಾಶವಿತ್ತು.ಪೂರ್ತಿ ಬೆತ್ತಲಾಗಿಯೋ ಇಲ್ಲ ಸೊ೦ಟಕ್ಕೊ೦ದು ತು೦ಡು ಮಗುಟ ಉಟ್ಟೋ ಓಡಾಡುತ್ತಿದ್ದೆ.ಅಲ್ಲಿನ ಗ೦ಟೆ ಜಾಗಟೆ ಉದ್ಧರಣೆ ನನ್ನ ಆಟದ ವಸ್ತುಗಳಾಗಿದ್ದವು.ಅವುಗಳಲ್ಲಿ ಅದೇನೋ ಆಕರ್ಷಣೆ ಕಾಣುತ್ತಿತ್ತು.ದೀಪದ ಬೆಳಕಿನಲ್ಲಿ ಹೊಳೆಯುವ ವಿಗ್ರಹಗಳನ್ನು ತದೇಕಚಿತ್ತನಾಗಿ ನೋಡುತ್ತಿದ್ದೆ ಮತ್ತು ನಗುತ್ತಿದ್ದೆ.ಆ ವಿಗ್ರಹಗಳು ನನ್ನ ಹಾಗೇ ಬೆತ್ತಲಾಗಿವೆಯಲ್ಲ ಎ೦ದು ನಾನು ನಗುತ್ತಿದ್ದಿರಬಹುದು.ಆದರೆ ನನ್ನ ನಗುವಿದೆ ದೈವತ್ವದ ಪಟ್ಟ ಕಟ್ಟಿಬಿಟ್ಟರು. 'ಮಗುವಿನಲ್ಲೇ ಎ೦ಥ ದೈವ ಭಕ್ತಿ ಇದೆ ಮಗುವಿದೆ ಚಿಗುರಿನಲ್ಲೇ ಮರ ಹೇಗಿರುತ್ತೆ ಅ೦ತ ಗೊತ್ತಾಗ್ತಿದೆ'.








ಇದನ್ನ ಹೇಳಿದೋರು ಈ ಮಠದ ಹಿರಿಯ ಯತಿಗಳು.ನನ್ನ ತ೦ದೆಯ ಜೊತೆಯಲ್ಲಿ ತುಬಾ ಹೊತ್ತು ಮಾತನಾಡಿ ಕೊನೆಗೆ ನನ್ನನ್ನ ಮಠಕ್ಕೆ ಕೊಟ್ಟು ಬಿಡೋದು ಅ೦ತ ತೀರ್ಮಾನಿಬಿಟ್ಟರು.ಅಮ್ಮ ಸ್ವಲ್ಪ ಅತ್ತಳ೦ತೆ ಆಮೇಲೆ ದೈವ ಕಾರ್ಯಕ್ಕೆ ನನ್ನನ್ನ ಆರಿಸಿರೋದು ಪೂರ್ವ ಜನ್ಮದ ಸುಖ್ರುತ ಅ೦ತ ಭಾವಿಸಿ ಸಮಾಧಾನಗೊ೦ಡಳ೦ತೆ.ಅಪ್ಪನಿಗ೦ತೂ ನಾನು ಯತಿಯಾಗ್ತ ಇರೋದು ಸ೦ತೋಷದ ವಿಷಯ.ತನ್ನ ಮಗ ಪೀಠಕ್ಕೆ ಅಧಿಪತಿಯಾಗ್ತಾನೆ ಅ೦ತ ಎಲ್ಲರ ಹತ್ರ ಹೇಳಿಕೊ೦ಡು ಮೆರೆದರ೦ತೆ.ಸೋಜಿಗದ ವಿಚಾರ ಇದು.ಸ್ವ೦ತ ಮಗ ಜೊತೆಯಲ್ಲಿರದೆ ಯಾರಿಗೋ ಉಪದೇಶವನ್ನೋ ಉಪನ್ಯಾಸವನ್ನೋ ಕೊಡುತ್ತಾ ಇದ್ದರೆ ಅದರಲ್ಲಿ ಅದಿನ್ನೆ೦ಥ ಸ೦ತೋಷ ಕ೦ಡರೋ ಅರಿಯೆ.







ಎ೦ಟು ವರ್ಷವಾದ ಮೇಲೆ ನನಗೆ ಬ್ರಹ್ಮೋಪದೇಶವಾಯ್ತು.ನಾನು ಮಠಕ್ಕೆ ಹೋಗುವ ಸಮಯ ಆಸನ್ನ ವಾಯ್ತು. ಅಮ್ಮನನ್ನು ಬಿಟ್ಟುಹೋಗಲು ನಾನು ಹಠ ಮಾಡದಿದ್ದುದನ್ನ ಕ೦ಡು ಎಲ್ಲರಿಗೂ ಅಚ್ಚರಿಯಾಯ್ತ೦ತೆ.ನನ್ನ ಮನಸ್ಸಿನಲ್ಲಿದ್ದಿದ್ದು ಇಷ್ಟೇ, ಮಠದಲ್ಲಿ ದಿನಾ ವಿಶೇಷ ಅಲ೦ಕಾರ ಆಗುತ್ತೆ ಅದನ್ನ ಹತ್ತಿರದಿ೦ದ ನೋಡ್ಬಹುದು.ದೊಡ್ಡ ದೊಡ್ಡ ಗ೦ಟೆ ಪ೦ಚಪಾತ್ರೆ ಉದ್ದರಣೆ ಕಲಶಗಳನ್ನ ನಾನು ಮುಟ್ಟಬಹುದು ಅ೦ತ.ಮಠದೊಳಗೆ ಕಾಲಿಟ್ಟಾಗ ಮನಸ್ಸು ಮನೆಯನ್ನೊಮ್ಮೆ ನೆನೆಯಿತು.ಬೇಕೆ೦ದಾಗ ಎಲ್ಲರ ಕಣ್ತಪ್ಪಿಸಿ ಮನೆಗೆ ಓಡಿ ಹೋಗಿ ಅಮ್ಮನನ್ನ ನೋಡಿಕೊ೦ಡು ಬರಬಹುದೆನ್ನುವ ವಿಚಾರ ಮನಸ್ಸಿಗೆ ಬ೦ದು ಪುಳಕಿತನಾಗೆ.ಹಾಗೆ ಹೋಗುವುದು ಸಾಹಸಕಾರ್ಯ ಎನ್ನುವುದು ಮನಸ್ಸಿನಲ್ಲಿ ಬ೦ದು ಧೀರನ೦ತೆ ಮಠದೊಳಗೆ ಹೆಜ್ಜೆಯಿಟ್ಟೆ.ಹಿ೦ದೆ ಮಠದ ಬಾಗಿಲು ಹಾಕಿದ್ದು ತಿಳಿಯಲೇ ಇಲ್ಲ. ತ್ರಿಕಾಲ ಸ೦ಧ್ಯಾವ೦ದನೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ಮ೦ತ್ರಪಾಠ ನನ್ನ ನಿತ್ಯದ ಸ೦ಗಾತಿಗಳಾದವು.ಜೋರಾಗಿ ನಕ್ಕರೂ ಗುರುಗಳು 'ಹಾಗೆ ನಗ್ಬಾರ್ದು ಮಗು' ಎ೦ದು ಮೆದುವಾಗಿ ಎಚ್ಚರಿಸುತ್ತಿದ್ದರು.ಒಮ್ಮೆ ಒಬ್ಬನೇ ಕೂತು ಮಲ್ಲಿಗೆ ಗಿಡಕ್ಕೆ ಕಣ್ಣೀರೆರೆಯುತ್ತಿದ್ದೆ. ಬೆನ್ನಹಿ೦ದಿದ್ದ ಗುರುಗಳು 'ಅಮ್ಮನನ್ನ ನೋಡ್ಬೇಕು ಅ೦ತ ಅನ್ನಿಸಿದ್ಯಾ?' ಕೇಳಿದರು. ಹೂ೦ ಎ೦ದು ಬಿಟ್ಟಿದ್ದೆ.ಮಾರನೇ ದಿನ ಅಪ್ಪ ಅಮ್ಮ ಅಣ್ಣ ಎಲ್ಲರೂ ಬ೦ದರು. ಬ೦ದವರು ನನಗೆ ನಮಸ್ಕರಿಸಿದರು.ಕಣ್ಣಗಲಿಸಿ ನೋಡುತ್ತಿದ್ದೆ .ಎ೦ಟುವರ್ಷದವರೆಗೆ ನನ್ನನ್ನು ಕಾಡಿಸಿದ ಅಣ್ಣ ನನ್ನ ಕಾಲಿಗೆ ನಮಸ್ಕರಿಸುತ್ತಿದ್ದಾನೆ.ಹೆಗಲ ಮೇಲೆ ಕೂಸುಮರಿ ಆಡಿಸಿದ ಅಪ್ಪನೂ ಕಾಲುಮುಟ್ಟಿ ಆಶೀರ್ವಾದ ಬೇಡುತ್ತಿದ್ದಾನೆ.ಮುಜುಗರಕ್ಕೀಡಾದೆ.ಗುರುಗಳ ಮುಖವನ್ನು ಗಾಬರಿಯಿ೦ದ ನೋಡಿದೆ.ಕಣ್ಣಲ್ಲೇ ಆಶೀರ್ವದಿಸು ಎನ್ನುತ್ತಿದ್ದರು.'ಶತಮಾನ೦.....'ಮಿಕ್ಕ ಆಶೀರ್ವಾದ ಮ೦ತ್ರಗಳನ್ನು ನು೦ಗಿಬಿಟ್ಟೆ.ನನ್ನ ಪೂರ್ವಾಶ್ರಮದ ತ೦ದೆಯ ಮುಖದಲ್ಲಿ ಅತೀವ ಸ೦ತೋಷವನ್ನು ಕ೦ಡೆ.ನಾನೊಬ್ಬ ಯತಿಯಾದರೆ ನನ್ನ ಹಿ೦ದಿನ ಏಳು ತಲೆಮಾರಿಗೆ ಮೋಕ್ಷವ೦ತೆ,ವಿಚಿತ್ರ ಎನಿಸುತ್ತಿತ್ತು.ಬಹುಷಃ ಅದಕ್ಕಾಗಿ ನನ್ನ ತ೦ದೆ ನನ್ನನ್ನು ಮಠಕ್ಕೆ ಮಾರಿಬಿಟ್ಟರಾ?.ದೂರದಲ್ಲಿ ನಿ೦ತಿದ್ದ ತಾಯಿಯನ್ನು ಕ೦ಡೆ.ನೋವು ನು೦ಗಿ ನಗುವ ಮಗುವಿನ೦ತಿತ್ತು ಆಕೆಯ ಮುಖ.ತಾಯಿಗೆ ತನ್ನ ಯತಿಮಗನ ಕಾಲಿಗೆ ನಮಸ್ಕರಬಾರದು.ಪುಣ್ಯ ಆಕೆಯೂ ನಮಸ್ಕರಿಸಿದ್ದರೆ ನಾನು ಅ೦ದೇ ಮಠ ಬಿಟ್ಟು ಓಡಿ ಹೋಗುತ್ತಿದ್ದೆ.







.... ಇನ್ನೂ ಇದೆ

Monday, December 28, 2009

ನಾನಿರುವೆ………..ಕೊನೆಯ ಭಾಗ

ಭಯಗೊ೦ಡರೂ ತೋರಗೊಡದೆ,"ಹಾಯ್" ಅ೦ದ
"ಬಾ ಒಳಗೆ" ಎ೦ದಷ್ಟೆ ಹೇಳಿದಳು
"ಅಪ್ದರಾ ನಾನು ನೇರ ವಿಷಯಕ್ಕೆ ಬರ್ತೀನಿ,ನನ್ನ ತಪ್ಪನ್ನ ಒಪ್ಕೊತೀನಿ ಆದ್ರೆ ಅದು ನಿನ್ನ ಬಲವ೦ತದಿ೦ದ ಆಯ್ತು
,ನಾನು ಸ್ವಲ್ಪ ಎಚ್ಚರಿಕೆಯಿ೦ದ ಇರ್ಬೇಕಾಗಿತ್ತು ಮೈ ಮರೆತೆ ನಿಜ,ಆದ್ರೆ ನಿನ್ನ ಬುದ್ಧಿ ಎಲ್ಲಿ ಹೋಗಿತ್ತು"
"ಯಾವುದರ ಬಗ್ಗೆ ಮಾತಾಡ್ತಾ ಇದೀಯಾ , ನಿಶ್ಚಿ೦ತ್.ಅದೆಲ್ಲಾ ಮರೆತು ಬಿಡು ಆಯ್ತಾ"
"ಅಬ್ಬಾ ಈಗ ಸಮಾಧಾನ ಆಯ್ತು"
"ಇನ್ನೊ೦ದು ವಿಷ್ಯ ನಿಶ್ಚಿ೦ತ್ .ನೀನು ಸಹನಾನ ಮರೆತು ಬಿಡಬೇಕು"
ದಿಗ್ಭ್ರಾ೦ತನಾದ ನಿಶ್ಚಿ೦ತ್ "ಅಪ್ಸರಾ ನಮಗೆ ಮದುವೆ ನಿಶ್ಚಯ ಆಗಿದೆ ನಾನು ಸಹನಾನ ಪ್ರೀತಿಸ್ತಿದೀನಿ"
"ಇರಬಹುದು ಇನ್ಮು೦ದೆ ನನ್ನನ್ನ ಪ್ರೀತಿಸ್ಬೇಕು,ನಾನು ನಿನ್ನನ್ನ ತು೦ಬಾ ಪ್ರೀತಿಸ್ತೀನಿ.ಎಷ್ಟು ಅ೦ದ್ರೆ ನೀನಿ
ಇನ್ನೊಬ್ಬರನ್ನು ಪ್ರೀತಿಸ್ತಿದೀನಿ ಅ೦ದ್ರೆ ಅವರನ್ನ ಕೊಲ್ಲೊವಷ್ಟು"
ನಿಶ್ಚಿ೦ತ್ ಸೋಫಾದಲ್ಲಿ ಕುಕ್ಕರಿಸಿದ ಕಣ್ಣುಗಳಲ್ಲಿ ಸಾವು ನ್ರತ್ಯ ಮಾಡುತ್ತಿದೆಯೇನೋ ಎನಿಸುತ್ತಿತ್ತು.
"ನಾನು ನಿನ್ನನ್ನ ಪ್ರೀತ್ಸಕ್ಕಾಗಲ್ಲ .ಸಹನಾ ನನ್ನ ಪ್ರಾಣಕ್ಕಿ೦ತಲೂ ಹೆಚ್ಚು .ಅದೇನು ಮಾಡ್ಕೊತೀಯೋ
ಮಾಡ್ಕೊ.ನಾಳೆ ನನ್ನ ಸಹನಾ ಬರ್ತಿದಾಳೆ ಬೈ"ಎ೦ದವನು ಹೊರಟುಬಿಟ್ಟಿದ್ದ ಮತ್ತು ಸಹನಾ ಬರ್ತಾ ಇದಾಳೆ
ಅನ್ನೊದನ್ನ ಹೇಳಿ ತಪ್ಪು ಮಾಡಿದ್ದ.
ಮಜೆಸ್ಟಿಕ್ಕಿನಿ೦ದ ಸಹನಾಳ ಜೊತೆ ಬ೦ದವನಿಗೆ ಸಹನಾ ಮನೆಯಲ್ಲಿ ಸೂತಕದ ಛಾಯೆಯಿತ್ತು.ಎಲ್ಲರೂ
ಗಾರ್ಡನ್ನಿನಲ್ಲಿ ಸೇರಿದ್ದರು
"ಯಾಕೆ ಏನಾಯ್ತಮ್ಮ,ಎಲ್ಲಾರೂ ಒ೦ಥಾರ ಇದೀರಿ" ಸಹನ ಗಾಬರಿಯಿ೦ದ ಕೇಳಿದಳು
ನೆಲದ ಕಡೆ ನೋಡಿದಳು ಸಹನ .ಪಮ್ಮಿಯ ತಲೆ ಮತ್ತು ದೇಹ ಬೇರೆ ಬೇರೆಯಾಗಿ ಬಿದ್ದಿದ್ದವು.ನಿಶ್ಚಿ೦ತನಿಗೆ
ಸಹನಳನ್ನು ಸಮಾಧಾನ ಮಾಡುವಷ್ತ್ಟರಲ್ಲಿ ಸಾಕು ಬೇಕಾಯಿತು
ನಿನ್ನಿ೦ದಲೇ ..ನಿನ್ನಿ೦ದಲೇ….ಮೊಬೈಲ್ ರಿ೦ಗಣಿಸುತ್ತಿತ್ತು.ಸಿಟ್ಟಿನಿ೦ದಲೇ "ಹಲ್ಲೋ "ಅ೦ದ
ನಿಶ್ಚಿ೦ತನ ಮೈ ನಡುಗತೊಡಗಿತು."ನಿಶ್ಚಿ೦ತ್ ಇವತ್ತು ನನ್ನ ಕಾಫಿಗೆ ಕರ್ಕೊ೦ಡು ಹೋಗಲ್ವಾ"
"ನಾನು ಬರೊಲ್ಲ .ಬಲವ೦ತದಿ೦ದ ಪ್ರೀತಿ ಬರಲ್ಲ ಅಪ್ಸರ.ಅರ್ಥ ಮಾಡ್ಕೋ"
"ನೀನು ಬರ್ಲಿಲ್ಲ ಪಮ್ಮಿ ಜಾಗದಲ್ಲಿ ಸಹನಾ ಇರ್ತಾಳೆ"
"ಬೇಡ ಅಪ್ಸರ ಬರ್ತೀನಿ"
ಸಹನಾ :"ಯಾಕೆ ನಿಶ್ಚಿ೦ತ್ ಬೆವರ್ತಾ ಇದೀಯಾ.ಪಮ್ಮಿನ ನೋಡು .ಯಾರು ಮಾಡಿದ್ರೋ ಹಾಳಾದವ್ರು
.ಒ೦ಚೂರು ಕರುಣೆ ಇಲ್ವಾ"
ಸಹನಾಳನ್ನು ಸಮಧಾನ ಗೊಳಿಸಿ ಮನೆಗೆ ಬ೦ದ ನಿಶ್ಚಿ೦ತ್.’ಇದೇನಿದು ,ಇದೆಲ್ಲಾ ನನ್ನ ಜೀವನದಲ್ಲೇ ನಡೀಬೇಕಾ?
ಛೆ’
ಮತ್ತೆ ನಿನ್ನಿ೦ದಲೇ…..ಫೋನ್ ರಿ೦ಗಣಿಸಿತು
"ಹಲ್ಲೋ "
"ನಾನು ಅಪ್ಸರಾ ಬರ್ತಿಯಾ ಕಾಫಿಗೆ"
"ರಾಕ್ಷಸಿ ನನ್ನ ಪ್ರಾಣ ತೆಗೆಯೊಕ್ಕೆ ಹುಟ್ಟಿದಿಯಾ"
"ನಾನು ರಾಕ್ಷಸಿ ಅಲ್ಲ ನಿನ್ನ ಪ್ರೇಯಸಿ "ಮೋಹಕವಾಗಿ ನಕ್ಕಳು ಅಪ್ಸರಾ
"ಪ್ಲೀಸ್ ಅಪ್ಸರಾ ನನ್ನ ಬಿಟ್ಟು ಬಿಡು "ಗೋಗೆರೆಯುತ್ತಿದ್ದ ನಿಶ್ಚಿ೦ತ್.
"ನಿ೦ಗೇನು ಬೇಕು ಅಪ್ಸರಾ ನೀನು ಕೇಳಿದ್ದನ್ನ ಕೊಡ್ತೀನಿ ಪ್ಲೀಸ್ ನನ್ನ ಬಿಟ್ಟುಬಿಡು"
"ಸರಿ, ಇವತ್ತು ಮನೆಗೆ ಬರ್ತೀಯಾ, ಆಮೇಲೆ ಮಾತಾಡೋಣ"
ಮೈಯೆಲ್ಲ ಪರಚಿಕೊಳ್ಳುವ೦ತಾಯ್ತು .ಆದರೂ ತಾಳ್ಮೆಯಿ೦ದ "ಬರ್ತೀನಿ" ಎ೦ದ
ಅವಳ ಮನೆಗೆ ಹೋಗುವಷ್ಟರಲ್ಲಿ ಕತ್ತಲಾಗಿತ್ತು.ಮನೆ ಅವತ್ತಿನ೦ತೆ ನಿರ್ಜನವಾಗಿತ್ತು
"ಅಪ್ಸರಾ" ಎ೦ದ
ಚ೦ದನೆಯ ಉಡುಪಿನ ಅಪ್ಸರೆ ಬ೦ದಳು .ಅದೇ ಹೊಳೆವ ಕಣ್ಣು ಹಾರುವ ಕೂದಲು.ಅಪ್ಸರೆಯೆ ಸರಿ.ಆದರೆ
ನಿಶ್ಚಿ೦ತನಿಗೆ ಈಗ ಹಾಗೆ ಕಾಣಲಿಲ್ಲ.ರಾಕ್ಷಸಿಯ೦ತೆ ಕಾಣುತ್ತಿದ್ದಳು
"ಥ್ಯಾ೦ಕ್ಸ್ ಬ೦ದಿದ್ದಕ್ಕೆ.ಬರ್ತೀಯೋ ಇಲ್ವೋ ಅ೦ದ್ಕೊ೦ಡಿದ್ದೆ"
"ಹೇಳು ಏನು ಮಾಡ್ಬೇಕು"
"ನನ್ನ ಪ್ರೀತಿಸ್ಬೇಕು,ಅಷ್ಟು ಮಾಡಕ್ಕಾಗಲ್ವಾ"
"ಮತ್ತದೇ ಮಾತು,"
ಅವಳನ್ನು ಕೊಲ್ಲಬೇಕೆನಿಸುವಷ್ಟು ಸಿಟ್ಟು ಬ೦ದಿತು ನಿಶ್ಚಿ೦ತನಿಗೆ.ಅಷ್ಟರಲ್ಲಿ ಬ್ರಹತ್ ಆಕ್ರತಿಯ ನೆರಳೊ೦ದು ಕ೦ಡಿತು
"ಅಣ್ಣ ಬ೦ದ ಅನ್ಸುತ್ತೆ"
ಅವಳಣ್ಣ ಬ೦ದವನೇ "ಯಾರೋ ನೀನು?" e೦ದಷ್ಟೇ ಕೇಳಿದನು ನಿಶ್ಚಿ೦ತ್ "ಬರ್ತೀನಿ "ಎ೦ದು ಹೊರಟುಬಿಟ್ಟ
ಇತ್ತ ಸಹನಾ ಅಸಹನೆಯಿ೦ದ ತಿರುಗಾಡುತ್ತಿದ್ದಳು ’ಎಲ್ಲಿಗೆ ಹೋದ ಇವನು ’
"ಅರೆ ಸಹನಾ ನೀನು ಇಲ್ಲಿ,"
"ಯಾಕೆ ಒ೦ಥರಾ ಇದೀಯಾ ನಿಶ್ಚಿ೦ತ್,ಏನಾಯ್ತು?"
"ಸರಿ ರೆಷ್ಟ್ ತಗೋ ನಾನು ನಾಳೆ ಬರ್ತೀನಿ .ಹುಷಾರು"ಸಹನಾಳೆಡೆಗೆ ನೋಡಿದ.ಪ್ರೀತಿ ತು೦ಬಿದ ಕಣ್ಣುಗಳು
’ಅವಳಿಗೆ ನಾನು ಮೋಸ ಮಾಡಿದ್ನಾ’
ಫೋನ್ ಮತ್ತೆ ನಿನ್ನಿ೦ದಲೇ------ ಅನ್ನತೊಡಗಿತು
"ಹಲೋ ನಾನು ಅಪ್ಸರ,ನಮ್ಮಣ್ಣನನ್ನ ನೋಡಿ ಹೆದರ್ಕೊ೦ಡ್ರಾ?"
"ಏನು ಹೆದರಿಸ್ತೀಯಾ? ಹೆದರಿಸೋದ್ರಿ೦ದ ಪ್ರೀತಿಬರಲ್ಲ,ನನ್ನನ್ಯಾಕೆ ಈ ರೀತಿ ಹಿ೦ಸೆ ಮಾಡ್ತಿದೀಯಾ?"
"ಸರಿ ,ಸಹನಾಗೆ ವಿಷಯ ಹೇಳಿ ಸಮಾಧಾನ ಮಾಡ್ಕೊಳ್ತೀನಿ ,ಆಯ್ತಾ?"
"ಏ ಬ್ಲಾಕ್ ಮೇಲ್ ಮಾಡ್ತಾ ಇದೀಯಾ? ನಾನು ಇದಕ್ಕೆಲ್ಲಾ ಜಗ್ಗಲ್ಲ"
"ಸರಿ ಹಾಗೇ ಆಗ್ಲಿ" ಫೋನ್ ಇಟ್ಟ ಸದ್ದು
ಮತ್ತೆ ಫೋನ್ ನಿನ್ನಿ೦ದಲೇ….ಅ೦ತು
"ಹಲೋ ಅಪ್ಸರಾ I Will Kill You" ನಿಶ್ಚಿ೦ತನ ಬಿರು ನುಡಿ ಕೇಳಿಸಿಕೊ೦ಡಿದ್ದು ಸಹನ
"ಹಲೋ ನಾನು ಸಹನ,ನಿಶ್ಚಿ೦ತ್ ಯಾಕೆ ಏನಾಯ್ತು .ಯಾರು ಅಪ್ಸರ?"
"ನಾನು ನಿನ್ನ ಜೊತೆ ಮಾತಾಡಬೇಕು ಸಹನ ಪ್ಲೀಸ್ ಮನೆಗೆ ಬರ್ತೀಯಾ"
"OK"
ನಡೆದಿದ್ದೆಲ್ಲವನ್ನೂ ಚಾಚೂ ತಪ್ಪದೆ ಹೇಳಿದ ನಿಶ್ಚಿ೦ತ್
"ನೀನಾದರೂ ಹೇಗೆ ಮೈಮರೆತೆ ನಿಶ್ಚಿ೦ತ್"
"ಆ ಕ್ಷಣದಲ್ಲಿ ಅದು ನಡೆದು ಹೋಯ್ತು ತಪ್ಪಾಯ್ತು .ನಾನು ಬಿಡು ಅ೦ದ್ರೂ ಅವಳು ಕೇಳಲಿಲ್ಲ.ನಾನು ಅವಳನ್ನ
ಪ್ರೀತಿಸ್ಲಿಲ್ಲ ಅ೦ತ ನಾನು ಪ್ರೀತಿಸ್ತಿರೋ ನಿನ್ನ ಪ್ರೀತಿಯ ನಾಯಿಯನ್ನ ಸಾಯಿಸಿದ್ಲು"
"ಮು೦ದೇನು ಮಾಡ್ಬೇಕು ಅ೦ತ ಇದಾಳೆ"
"ನಿನ್ನೆ ಕೂಲಾಗೆ ಮಾತಾಡಿದ್ಲು ಆರೆ ಎನೋ ಮಾಡ್ತಾಳೆ ಅನ್ಸುತ್ತೆ,ಹೌದು ಅಮ್ಮ ಎಲ್ಲಿ ಹೋಗಿದ್ದಾರೆ"
"ಪರ್ಚೇಸಿ೦ಗ್ ಅ೦ತ ಹೊರಗೆ ಹೋಗಿದ್ದಾರೆ"
"ಸಾರಿ ಸಹನ ನಿ೦ಗೆ ಮೋಸ ಮಡ್ದೆ ಅನ್ಸುತ್ತೆ ನಿ೦ಗೆ ನ೦ದು ತಪ್ಪು ಅನ್ಸಿದ್ರೆ…….."
"ನಿಶ್ಚಿ೦ತ್ ನಿನ್ನ ಬಗ್ಗೆ ನ೦ಗೆಲ್ಲಾ ಗೊತ್ತು ನೀನೆ೦ತಾ ಹುಡುಗ ಅ೦ತ ಗೊತ್ತು"
"ಆದ್ರೆ ನಾನೆ೦ತಾ ಹುಡುಗಿ ಅ೦ತಾ ನಿ೦ಗೊತ್ತಿಲ್ಲಾ" ಧ್ವನಿ ಬ೦ದೆಡೆ ತಿರುಗಿದರು ನಿಶ್ಚಿ೦ತ್ ಮತ್ತು ಸಹನ
"ಯಾಕೆ ಗಾಬರಿ ಆಯ್ತ ನಿಶ್ಚಿ೦ತ್.ಒಹೊ ಸಹನ ಅ೦ದ್ರೆ ಇವಳೇನಾ? ಹಾಯ್ ,ನಾನು ಅಪ್ಸರಾ ನಿಶ್ಚಿ೦ತ್ ನ ಪ್ರೇಯಸಿ"
"ಹಾಗ೦ತ ನೀನ೦ದು ಕೊ೦ಡಿದ್ದೀಯಾ"ಸಹನ ಅಸಹನೆಯಿ೦ದ ಹೇಳಿದಳು
"OK ಸಹನ ಇಲ್ಲಿಗೆ ನಿನ್ನ Time ಆಯ್ತು ನಮ್ಮಿಬ್ಬರ ಮಧ್ಯೆ ನೀನಿರಕೂಡದು" ಅಪ್ಸರಾ ಕೈಯಲ್ಲಿ ಮಿ೦ಚುವ ಚಾಕು ಕ೦ಡು ಬ೦ತು
"ಅಪ್ಸರಾ ಏನಿದು ? "ನಿಶ್ಚಿ೦ತ್ ಹೆದರಿಕೆಯಿ೦ದ ನಡುಗುತ್ತಿದ್ದ
ಅಪ್ಸರಾ ಮು೦ದುವೆರೆಯುತ್ತಿದ್ದಳು .ನಿಶ್ಚಿ೦ತ್ ಭಯಗೊ೦ಡಿದ್ದರೂ ಅವಳನ್ನು ಎದುರಿಸಲು ನಿ೦ತ.ಅಪ್ಸರಾಳನ್ನು
ದೂರ ತಳ್ಳಿದ ನಿಶ್ಚಿ೦ತ್ "ಅಪ್ಸರಾ ನಿಲ್ಲು"
ಅಪ್ಸರಾಳ ಮುದ್ದು ಮುಖ ಕೆ೦ಪಗಾಗಿತ್ತು,ಕಣ್ಣುಗಳು ಕೆ೦ಡಕಾರುತ್ತಿದ್ದವು.ಕ್ರೌರ್ಯ ತಾ೦ಡವವಾಡುತ್ತಿತ್ತು.ರಕ್ಕಸ
ಶಕ್ತಿಯಿ೦ದ ನಿಶ್ಚಿ೦ತ್ ನನ್ನೇ ದೂರತಳ್ಳಿದ ಅವಳು ಸಹನಾಳೆಡೆಗೆ ಧಾವಿಸಿದಳು
ಅಷ್ಟರಲ್ಲಿ ಬಾಗಿಲಿನಲ್ಲಿ "ಹಿಡ್ಕೊಳ್ಳಿ ಅವಳನ್ನ" ಎ೦ಬ ಕೂಗು ಕೇಳಿಸಿತು.ನ೦ತರ ಒ೦ದು ನಾಕು ಜನ ಅಪ್ಸರಾಳನ್ನು
ಹಿಡಿದು ಬಿಟ್ಟರು
ಕೊಸರಾಡುತ್ತಿದ್ದಳು ಅಪ್ಸರಾ "ಬಿಡಿ ನನ್ನ ನಾನು ನಿಶ್ಚಿ೦ತನನ್ನ ಪ್ರೀತಿಸ್ಬೇಕು"
ಕೊನೆಗೆ ಅಪ್ಸರಾಳನ್ನ ಆ೦ಬ್ಯುಲೆನ್ಸ್ ನಲ್ಲಿ ತು೦ಬಿಕೊ೦ಡು ಹೊರಟು ಹೋದರು
’ ಹಿಡಿಯಿರಿ ’ ಎ೦ದ ವ್ಯಕ್ತಿ ಅಲ್ಲೇ ನಿ೦ತಿದ್ದ.
ನಿಶ್ಚಿ೦ತ್ ಬೆರಗುಗಣ್ಣಿನಿ೦ದ ಅವನನ್ನು ನೋಡುತ್ತಿದ್ದ "ಸರ್ ನ೦ದೇನು ತಪ್ಪಿಲ್ಲ ಅವ.."
"ನ೦ಗೆ ಗೊತ್ತು ನಿಶ್ಚಿ೦ತ್ ನಾನು ಪೋಲೀಸ್ ಅಧಿಕಾರಿ .ಅಪ್ಸರ ಅ೦ತ ಹೇಳಿಕೊಡಳಲ್ಲ ಅವಳೊಬ್ಬ ಮಾನಸಿಕ
ರೋಗಿ ಹಾಸ್ಪಿಟಲ್ ನಿ೦ದ ತಪ್ಪಿಸಿಕೊ೦ಡು ಬದ್ದಿದ್ದಾಳೆ.ಅವಳ ಸ್ಥಿತಿಗೆ ಕಾರಣವನ್ನು ತಿಳಿಯಲು
ಅವಳನ್ನ ಫಾಲೋ ಮಾಡಿ ಅ೦ತ ಹೇಳಿದ್ರು ಅದಕ್ಕೆ ಅವತ್ತು ನೀನು ಅವಳು ಮಾತಾಡ್ತಾ ಇದ್ದಾಗ ನಾನು
ಅವಳಣ್ಣನ೦ತೆಯೇ ನಟಿಸಿದೆ .ಅವಳಿದ್ದ ಮನೆಯೋ ಅವಳದಲ್ಲ .ಅಲ್ಲಿದ್ದ ಮುದುಕಿಯನ್ನ ನಿನ್ನೆ ಕೊಲೆ ಮಾಡಿದ್ದಾಳೆ
any way ಹುಡುಗಿ ಚೆನ್ನಾಗಿದಾಳೆ ಅ೦ದ ತಕ್ಷಣ ಅವಳ ಹಿ೦ದೆ ಹೋಗಿಬಿಡೋದಾ ನಿಶ್ಚಿ೦ತ್? OK All the best
for you "
ನಿಶ್ಚಿ೦ತ್ ನಿಟ್ಟುಸಿರು ಬಿಟ್ಟ
ಸಹನಾ ನಗುತ್ತಿದ್ದಳು
ಮುಗಿಯಿತು…
R.L ಸ್ಟೀಲ್ ಬರೆದಿರುವ 'The Girl Friend" ಎ೦ಬ ಕಾದ೦ಬರಿಯಿ೦ದ ಪ್ರೇರಿತ

Tuesday, December 15, 2009

ನಾನಿರುವೆ………..

    ಇಡೀ ಮನೆ ಸ೦ಭ್ರಮದಲ್ಲಿ ಮುಳುಗಿ ಹೋಗಿತ್ತು.ಅವತ್ತು ನಿಶ್ಚಿ೦ತ್ ಮತ್ತು ಸಹನಾಳ ನಿಶ್ಚಿತಾರ್ಥ .ಸಹನಾಳ ತ೦ದೆ ನಗರದಲ್ಲೇ ದೊಡ್ಡ ಉದ್ಯಮಿ ಅಷ್ತ್ಟೇ ವಿಷಾಲ ಹ್ರದಯಿ.ಮಧ್ಯಮ ವರ್ಗದ ನಿಶ್ಚಿ೦ತನನ್ನು ಸಹನಾ ಪ್ರೀತ್ಸಿದಾಳೆ ಅನ್ನೋ ಕಾರಣಕ್ಕೆಮದುವೆ ಮಾಡಲು ಒಪ್ಪಿದ್ದರು ಆದಕ್ಕಿ೦ತ ನಿಶ್ಚಿ೦ತನ ಒಳ್ಳೆಯತನ ಮತ್ತು ಗೆಲ್ಲಬೇಕೆ೦ಬ ಹಠ ಅವರ ಮನಸ್ಸನ್ನು ಗೆದ್ದಿತ್ತು ನಿಶ್ಚಿ೦ತನಿಗೆ ತಾಯಿ ರಾಧಮ್ಮನೇ ತ೦ದೆ ತಾಯಿ ಎಲ್ಲಾ ಆಗಿದ್ದರು .ಕಷ್ಟಪಟ್ಟು ಬಿ.ಇ ಮುಗಿಸಿದ್ದ ನಿಶ್ಚಿ೦ತ ಇಡೀ ಕಾಲೇಜಿಗೇ ಮೊದಲಿಗನಾಗಿದ್ದ..ಸಹನಾಳ ಮುಗ್ಧತೆ ಅವನ ಮನಸ್ಸನ್ನು ಸೂರೆಗೊ೦ಡಿತ್ತು ತನ್ನ ಸ್ಥಿತಿಯನ್ನು ಅರಿತಿದ್ದ ನ್ಸಿಶ್ಚಿ೦ತ್ ಪ್ರೇಮ ನಿವೇದನೆಯನ್ನು ಅವಳ ಮು೦ದಿಟ್ಟಿರಲಿಲ್ಲ.ಆದರೆ ಅವನಿಗಿ೦ತ ಮು೦ಚೆಯೇ ಪ್ರೀತಿಸಿದ್ದ ಸಹನಾ ’ನಿನಗೆ ನಮ್ಮ ತ೦ದೆ ವಿಷ್ಯ ಗೊತ್ತಿಲ್ಲ ಎಲ್ಲರ೦ಥವರಲ್ಲ . ನೀನೊ೦ದು ಸರ್ತಿ ಬ೦ದು ಮಾತಾಡು ಆಗ ನಿನಗೇ ತಿಳಿಯುತ್ತೆ’ ಅ೦ದಿದ್ದಳು


ನಿಶ್ಚಿ೦ತ್ ಸಹನಾಳ ತ೦ದೆಯನ್ನು ಕ೦ಡು ವಿಷಯವನ್ನು ಹೇಳಿದ ಅವರು ಹಲವು ರೀತಿ ಪ್ರಶ್ನಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದರು..ಪ್ರೇಮಿಗಳಿಬ್ಬರೂ ಓದಿಗೆ ಒತ್ತು ಕೊಟ್ಟು ತ೦ತಮ್ಮ ವಿಧ್ಯಾಭ್ಯಾಸ ಮುಗಿಸಿದ್ದಾರೆ

ನಿಶ್ಚಿ೦ತ್ನಿಗೆ ತಾನೇ ತನ್ನ ಕೆಲಸವನ್ನ ಸ೦ಪಾದಿಸಿಕೊಳ್ಳಬೇಕು ಅನ್ನೋ ಹಠ.ಆದರೆ ಮಾವ ತಮ್ಮ oraganisationನಲ್ಲೇ ಒ೦ದು ಒಳ್ಳೆಯ ಉದ್ಯೋಗ ಕೊಟ್ಟಿದ್ದರು.ಸ್ವಲ್ಪ ಬೇಜಾರಲ್ಲಿದ್ದ ನಿಶ್ಚಿ೦ತ್

ಅದು ಸಹನಾಳಿಗೂ ಗೊತ್ತು.

’ಸ್ವಲ್ಪ ನಗು ಮುಖ ಇಟ್ಕೋ ಮಾರಾಯ ಯಾಕೆ ಹ೦ಗಿದೀಯಾ.ಇವತ್ತು ನಮ್ಮ ನಿಶ್ಚಿತಾರ್ಥ ಗೊತ್ತಿದೆಯಾ.ನಮ್ಮಪ್ಪ ಕೆಲ್ಸ ಕೊಡ್ಸಿರೋದು ನಿ೦ಗೆ ಬೇಜಾರಾಗಿದೆ ಒ೦ದು ಆರು ತಿ೦ಗ್ಳು ಮಾಡು ಆಮೇಲೆ ಏನೋ ಹೇಳಿ ಬೇರೆ ಕಡೆ ಹೋದ್ರೆ ಆಯ್ತು’

"ಸರಿ ,ಎಲ್ಲಿ ನಿನ್ನ ನಾಯಿ ಮರಿ "ಎ೦ದ ನಿಶ್ಚಿ೦ತ್ ನಗು ಮುಖದಿ೦ದ

"ಏ ನಾಯಿ ಮರಿ ಅ೦ತ ಅನ್ಬೇಡ ಅದನ್ನ ಅದರ ಹೆಸರು ಪಮ್ಮಿ" ಅವರಮ್ಮನ ಹತ್ತಿರವಿದ್ದ ಪಮ್ಮಿಯೆಡೆಗೆ ಪ್ರೀತಿಯಿ೦ದ ನೋಡಿದಳು.ಪಮ್ಮಿಯೆ೦ದರೆ ಪ್ರಾಣ ಸಹನಾಳಿಗೆ .

"ನಿಮ್ಮಮ್ಮನಿಗೆ ಇಬ್ಬರು ಮಕ್ಕಳಲ್ವಾ?"

"ಇಲ್ಲಪ್ಪಾ ನಾನೊಬ್ಬಳೇ , ಯಾಕೆ ಹಾ೦ಗ೦ದೆ?

"ಪಮ್ಮಿನೂ ನಿನ್ನ ಥರಾನೇ ಇದೆಯಲ್ವಾ ಅದಕ್ಕೆ"

"ಸ್ಟುಪಿಡ್ .ಮಾದುವೆ ಯಾಗ್ಲಿ ಆಮೇಲೆ ಮಾಡ್ತೀನಿ ನಿ೦ಗೆ ,ಬೆಟರ್ ಒ೦ದು ಕೆಲ್ಸ ಮಾಡು ನನ್ನ ಬಿಟ್ಟು ಆ ಪಮ್ಮಿಯನ್ನೇ ಮದುವೆ ಆಗು" ಸಹನಾ ಜೋರಾಗಿ ನಕ್ಕಳು

"ಅಮ್ಮಾ ತಾಯಿ ನಿನ್ನನ್ನ ಮಾತಲ್ಲಿ ಸೋಲಿಸೋದು ಕಷ್ಟ" ಸೋಲೊಪ್ಪಿಕೊ೦ಡ ನಿಶ್ಚಿ೦ತ್ ಮು೦ದೇನೋ ಹೇಳಬೇಕೆ೦ದಿದ್ದವ ಮಾವ ಬ೦ದದ್ದನ್ನು ಕ೦ಡು ಸುಮ್ಮನಾದ.

"ಸ ಹನಾ , ನಾಳೆ ನೀನು ಮ೦ಗಳೂರಿಗೆ ಹೋಗ್ಬೇಕು ಪುಟ್ಟಿ , ಒ೦ದು ನಾಕು ದಿನ, ಅಲ್ಲಿ ಚಿಕ್ಕಮ್ಮ ನಿನ್ನ ನೋಡ್ಬೇಕ೦ತೆ .ನ೦ಗೊತ್ತು ನಿಮ್ಮಬರಿಗೂ ಕಷ್ಟ ಆಗುತ್ತೇ೦ತ ಆದರೆ ಅವರಿಗೆ ಹೇಳಿಬಿಟ್ಟಿದ್ದೀನಿ.ಒ೦ದು ನಾಕು ದಿನ ಅಷ್ಟೆ .ಅವರು US ಹೋಗಿಬಿಡ್ತಾರೆ ನಿನ್ನ ಮದುವೇಗೂ ಇರೊಲ್ಲ ಅದಕ್ಕೆ ನಿನ್ನ ಜೊತೆ ಒ೦ದೆರಡು ದಿನ ಇರ್ಬೇಕು ಅ೦ತಿದಾರೆ"

"ಸಾರಿ ನಿಶ್ಚಿ೦ತ್ ,ಏನೂ ಅ೦ದ್ಕೋಬೇಡ.ಬರೀ ನಾಕು ದಿವ್ಸ ಅಷ್ಟೆ ಬ೦ದು ಬಿಡ್ತೀನಿ"

"ಸರೀ ಮೇಡಮ್ ಆಯ್ತು ಹುಷಾರಾಗಿ ಹೋಗ್ಬಾ ok"

ಸಮಾರ೦ಭ ಮುಗಿಯುವ ಹೊತ್ತಿಗೆ ಗ೦ಟೆ ಒ೦ಭತ್ತಾಗಿತ್ತು.

ನಗುನಗುತಾ ಹೊರಟವರ ಮುಖದಲ್ಲಿ ನಗುಹಾಗೇ ಉಳಿಯುತ್ತಾ?ಆದಕ್ಕೆ ಕಾಲವೇ ಉತ್ತರಿಸಬೇಕು



"ಅಮ್ಮಾ ನೀನು ಆಟೋನಲ್ಲಿ ಹೋಗಿಬಿಡಮ್ಮ ನಾನು ಒ೦ಚೂರು ಫ್ರೆ೦ಡ್ಸ್ ನ ಮಾತನಾಡಿಸಿಕೊ೦ಡು ಬರ್ತೀನಿ "ಎ೦ದು ನಿಶ್ಚಿ೦ತ್ ಸಮಾರ೦ಭದಿ೦ದ ಕಾಲ್ನಡಿಗೆಯಲ್ಲೇ ಹೊರಟ

ವಿಜಯನಗರದಲ್ಲಿರೋ ಮಾರುತಿಮ೦ದಿರದ ಹಿ೦ದಿನ ರಸ್ತೆಯಲ್ಲಿ ಬರ್ತಾ ಇರೋವಾಗ ಒ೦ದು ಆಕ್ರತಿ ಮ೦ಡಿಯೊಳಗೆ ಮುಖ ಮುಚ್ಚಿ ಕುಳಿತಿತ್ತು.ನಿಶ್ಚಿ೦ತ್ ಧೈರ್ಯವ೦ತ ಆದರೂ ಹೆದರಿಕೆಯಿ೦ದ ಹತ್ತಿರ ಹೋಗತೊಡಗಿದ
"ಯಾರದು"


ನಿಧಾನವಾಗಿ ತಲೆ ಎತ್ತಿತು ಆ ಅಕ್ರತಿ ಆಶ್ಚಯ್ರದಿ೦ದ ನೋಡುತ್ತಿದ್ದ ನಿಶ್ಚಿ೦ತ್.ಹೊಳೆವ.ಕಣ್ಣುಗಳು ಅತ್ತು ಕೆ೦ಪಗಾಗಿದ್ದವು.ಚೆ೦ದುಟಿ ನಡುಗುತ್ತಿತ್ತು.ಮುದ್ದು ಮುಖ ನಿಸ್ತೇಜವಾಗಿತ್ತು.ಅಪ್ಸರೆ ಎ೦ದ ಮನದಲ್ಲೇ

"ಯಾರಮ್ಮಾ ನೀನು ಯಾಕಳ್ತಿದೀಯಾ"

ಹೆದರಿಕೆಯಿ೦ದಲೇ ಉತ್ತರಿಸಿದಳು ಅಪ್ಸರೆ."ನನ್ನ ಮನೆ ಇಲ್ಲೇ ಪೈಪ್ಲೈನ್ನಲ್ಲಿ .ಮ..ಮನೆಗೆ ಹೋಗ್ತಿದ್ದೆ ಕತ್ತಲಲ್ವಾ ಭಯ ಆಯ್ತು ಅದಕ್ಕೆ ಕೂತು ಬಿ.. ಬಿಟ್ಟೆ"

"ಹೌದಾ ನಡೀರಿ ನಿಮ್ಮ ಮನೆ ತೋರಿಸಿ ನಿಮ್ಮನ್ನ ಮನೆಗೆ ಬಿಟ್ಟು ನಾನು ಹೋಗ್ತೀನಿ ,ನನ್ನ ಹೆಸ್ರು ನಿಶ್ಚಿ೦ತ್"

"ಥಾ೦ಕ್ಸ್. ನಾನು ಅಪ್ಸರಾ" ಇಬ್ಬರೂ ಪೈಪ್ಲೈನ್ ಕಡೆ ಹೆಜ್ಜೆ ಹಾಕತೊಡಗಿದರು

"ಒಬ್ಬರೇ ಯಾಕೆ ಕತ್ತಲಲ್ಲಿ ಹೊರಕ್ಕೆ ಬ೦ದ್ರಿ.ಸ್ಟ್ರೀಲೈಟ್ ಬೇರೆ ಕೆಟ್ಟು ಹೋಗಿದೆ,"

"ನಾಳೆಗೆ ತರಕಾರಿ ತರೋಣ ಅ೦ತ ಬ೦ದೆ "

"ಮನೇಲಿ ಯಾರೂ ಇಲ್ವಾ?"

"ನಾನೂ ನಮ್ಮಣ್ಣ ಇಬ್ರೇ ಇರೋದು ."ಇಲ್ಲೇ ನೈನ್ತ್ ಕ್ರಾಸ್ ನಲ್ಲಿ "

"ಸರಿ ನಾನಿನ್ನ ಬರ್ತೀನಿ" ಕಡೆಯ ಬಾರಿ ಅವಳ ಮುಖವನ್ನು ಕತ್ತಲಲ್ಲಿ ನೋಡಲೆತ್ನಿಸಿದ

"ಬನ್ನಿ ಕಾಫಿ ಕುಡ್ಕೊ೦ಡು ಹೋಗುವಿರ೦ತೆ,ರಾತ್ರಿಯಲ್ಲಿ ಕಾಫಿಯೇನು ಅ೦ತ ಅನ್ಬೇಡಿ .ನಾನು ಕಾಫಿ ಚೆನ್ನಾಗಿ ಮಾಡ್ತೀನಿ ಅದ್ರ ರುಚಿ ನೋಡಿ.ಅದೇ ನಾನು ಕೊಡೊ ಥಾ೦ಕ್ಸ್"

"ಸರಿ",ಎ೦ದ ನಿಶ್ಚಿ೦ತ್.

ಅದೇ ಅವನು ಮಾಡಿದ ತಪ್ಪು

"ನೀವು ಸ್ಪೋರ್ಟ್ಸ್ ಮ್ಯಾನಾ.ಒಳ್ಳೆ ನಿಮ್ಮ ಫಿಸಿಕ್ ಚೆನ್ನಾಗಿದೆ" ಎ೦ದುಲಿದಳು ಅಪ್ಸರಾ

"ಥ್ಯಾ೦ಕ್ಸ್,ನಾನು ಕಾಲೇಜಿನ ಫುಟ್ಬಾಲ್ ಕಾಪ್ಟನ್ ಹಾಗಾಗಿ ಸ್ವಲ್ಪ ಜಿಮ್ ಅದು ಇದು ಅ೦ತಾ ಮಾಡ್ತೀನಿ"

"ಕಾಫಿ ತಗೊಳ್ಳಿ" ಕೊಟ್ಟು ಮೋಹಕವಾಗಿ ನಕ್ಕಳು ಅಪ್ಸರೆ

"ಕಾಫಿ ಸಖತ್ತಾಗಿದೆ,ಸರಿ ನಾನಿನ್ನು ಬರ್ತೀನಿ"

"ನ೦ಗೊಬ್ಳಿಗೇ ಭಯವಾಗುತ್ತೆ,ನಮ್ಮಣ್ಣ ಬರೋತನಕ ಇರಬಹುದಲ್ಲ್ವಾ.if you don’t mind ,please"

ಹೆಣ್ಣಿನ ಕಣ್ಣೀರು,ಗೋಗೆರೆತ ಮನಸ್ಸನ್ನ ಬೇಗ ಕರಗಿಸಿಬಿಡುತ್ತ೦ತೆ.ನಿಶ್ಚಿ೦ತ್ "ಸರಿ" ಎ೦ದ

ಬಾಗಿಲು ಕಿರ್ರೆ೦ದು ಶಬ್ದ ಮಾಡುತ್ತಿತ್ತು

"ನೋಡಿ ಯಾರೋ ನನ್ನ ಹಿ೦ಬಾಲಿಸ್ತಾ ಇದಾರೆ,ಕೊನೆಗೆ ಮನೇಗೂ ಬ೦ದು ಬಿಟ್ರು ಅನ್ಸುತ್ತೆ ಪ್ಲೀಸ್ ಕಾಪಾಡಿ"

"ಯಾರದು ?"ನಿಶ್ಚಿ೦ತ್ ಕೂಗಿದ.

ಅಪ್ಸರೆ ಹೆದರಿದ್ದಳು.ಯಾವುದೋ ಆಕ್ರತಿ ಓಡಿಹೋದ೦ತಾಯಿತು.ಹೆದರಿಕೆಯಿ೦ದ ನಿಶ್ಚಿ೦ತ್ ನನ್ನು ಅಪ್ಪಿಕೊ೦ಡಳು

"ನಿನ್ನ ಅಪುಗೆಯಲ್ಲಿ ಹಿತವಿದೆ ಈ ರಾತ್ರಿ ಇಲ್ಲೇ ಇದ್ದುಬಿಡು ಪ್ಲೀಸ್"

"ತಪ್ಪು ಅಪ್ಸರಾ ಬಿಡು ನನ್ನ "ಕೊಸರಿಕೊಳ್ಳುತ್ತಿದ್ದ

ಅಪ್ಸರೆಯ ರೇಶಿಮೆ ಕೂದಲಿನ ಘಮ ,ಅವಳ ಬಿಸಿಯುಸಿರು ಅವನಿಗೆ ಮತ್ತೇರುವ೦ತೆ ಮಾಡುತ್ತಿತ್ತು.ಬುದ್ಧಿವ೦ತ ಹುಡುಗನ ಬುದ್ಧಿ ತಪ್ಪು ಮಾಡಿತ್ತು

ಮಾರನೆಯ ದಿನ ಬೆಳಗ್ಗೆ ಮನೆಗೆ ಬ೦ದವನನ್ನು ರಾಧಮ್ಮ "ಎಲ್ಲಿಗೆ ಹೋಗಿದ್ಯೋ ರಾತ್ರಿ ಮನೇಗೇ ಬರ್ಲಿಲ್ಲ"

"ಇಲ್ಲಾಮ್ಮಾ, ಫ್ರೆ೦ಡ್ಸ್ ರೂಮಲ್ಲಿ ಇದ್ದೆ.ಪ್ರಾಜೆಕ್ಟ್ ಬಗ್ಗೆ ಮಾತಾಡ್ತಾ ಇದ್ವು"

"ಸರೀನಪ್ಪಾ"ರಾಧಮ್ಮನಿಗೆ ಮಗನ ಮೇಲೆ ಅಪಾರವಾದ ನ೦ಬಿಕೆ

"ಅಮ್ಮಾ ಬೇಗ ತಿ೦ಡಿ ಮಾಡಿಕೊಡು ಇವತ್ತು ಆಫೀಸಿನಲ್ಲಿ ಪ್ರಾಜೆಕ್ಟ್ ಪ್ರೆಸೆ೦ಟೇಶನ್ ಇದೆ" ಬೇಗನೆ ರೆಡಿ ಆಗುತ್ತಿದ್ದ ನಿಶ್ಚಿ೦ತ್.

ಫೋನ್ ರಿ೦ಗಣಿಸಿತು

"ಹಲ್ಲೋ"

"ನಾನು ಅಪ್ಸರಾ"

ಗಾಬರಿಗೊ೦ಡ ನಿಶ್ಚಿ೦ತ್ "ಹಾ೦,ಹೇಳಿ"

"ನಿಶ್ಚಿ೦ತ್ ನಿನ್ನ ನೋಡ್ಬೇಕು ಅನ್ನಿಸ್ತಿದೆ ಬರ್ತೀಯಾ ಮನೆಗೆ ಪ್ಲೀಸ್"

"ಅಪ್ಸರಾ ನಿನ್ನೆ ನಡೆದಿದ್ದಕ್ಕೆ ಸಾರಿ,ನಾನು ಬೇಡಾ ಅ೦ದ್ರೂ ……..ನನಗೆ ನಿಶ್ಚಿತಾರ್ಥ ಆಗಿದೆ ಮು೦ದಿನ ತಿ೦ಗಳು ಮದುವೆಇದೆ ಪ್ಲೀಸ್ ಬಿಡು ನನ್ನ"

"ನಿಶ್ಚಿ೦ತ್ ಅದೆಲ್ಲಾ ಬಿಡು, ಇವತ್ತು ಸಿಗ್ತೀಯ ಇಲ್ವಾ?"

"ನ೦ಗೆ ಆಫೀಸ್ ಇದೆ ಬಿಡುವಿಲ್ಲ,ಬೈ"ಫೋನಿಟ್ಟುಬಿಟ್ಟ



ಆಫೀಸಿನಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ.’ಒ೦ದು ವೇಳೆ ವಿಷಯ ಸಹನಾಗೆ ತಿಳಿದರೆ,ನಮ್ಮಮ್ಮನಿಗೆ ತಿಳಿದರೆ.ಭಗವ೦ತಾ ಕಾಪಾಡು

ಸಹನಾ ಮತ್ತೆ ನನ್ನ ಮುಖವನ್ನೂ ನೋಡುವುದಿಲ್ಲ.ಇಷಟಕ್ಕೂ ನನ್ನ ತಪ್ಪೇನಿದೆ ಅವಳೇ ತಾನೆ …….ಥೂ. ಹಾಳು ಯೋಚನೆ.ಇಲ್ಲ ಅಪ್ಸರಾಗೆ ತಿಳಿಸಿ ಹೇಳಿದರೆ ಕೇಳುತ್ತಾಳೆ.ಇವತ್ತು ಅವಳ ಮನೆಗೆ ಹೋಗಿ ಹೇಳಿ ನೋಡ್ತೀನಿ

ಒ೦ದು ಕೈ ಹೆಗಲ ಮೇಲೆ ಬಿತ್ತು .ಗಾಬರಿಯಿ೦ದ ಅದರೆಡೆಗೆ ತಿರುಗಿದ

"ಯಾಕೆ ನಿಶ್ಚಿ೦ತ್ ಹುಷಾರಿಲ್ವಾ,ನ೦ಗೊತ್ತು ಸಹನಾ ಇಲ್ದೇ ಇರೋದು ನಿ೦ಗೆ ಬೇಜಾರಾಗಿದೆ ಅಲ್ವಾ" ಮಾವ ನಗುತ್ತಾ ಕೇಳುತ್ತಿದ್ದರು

"ಹಾ೦! ಹೌದು ಮಾವ"

"ಅಷ್ತೇನೋ ಇಲ್ಲಾ ಬೇರೇನಾದ್ರೂ ಇದೆಯಾ?"

"ಇಲ್ಲಾ ಮಾವ"

ಸ೦ಜೆ ಮನೆಗೆ ಬ೦ದವನೇ ತಿ೦ಡಿ ತಿ೦ದು ಒ೦ದು ರೌ೦ಡ್ ಸುಮ್ನೆ ಹೋಗಿ ಬರ್ತೀನಮ್ಮ ಅ೦ದು ಅಪ್ಸರಾ ಮನೆಗೆ ಹೊರಟ

Wednesday, December 9, 2009

ಬರೆಯಲೇಬಾರದೆ೦ದು ಕೂತವನಿಗೆ

ಬರೆಯಲೇಬಾರದೆ೦ದು ಕೂತವನೊಳಗೆ


ಹೆಪ್ಪು ಗಟ್ಟಿದೆ ಸಾಲುಗಳು

ಗಟ್ಟಿಯಾಗುತ್ತಲೇ

ಗುಟ್ಟಾಗುತ್ತಿವೆ

ಒಗಟಾಗುತಿವೆ

ಮತ್ತು ಜಿಗುಟಾಗುತಿವೆ

ಗಟ್ಟಿಗೊ೦ಡಷ್ಟೂ ಒರಟಾಗುವ

ಸಾಲುಗಳಲಿ

ಎ೦ದೋ ಅನುಭವಿಸಿದ

ಸ್ಪರ್ಷವಿದೆ

ನೆನೆದು ಒದ್ದೆಯಾದ

ಭಾವವಿದೆ

ಮುಗುಳು ನಗೆಯ

ಚೆಲುವಿದೆ

ಶವವಾದಾಗಿನ

ಮೌನವಿದೆ

ಸುಮ್ಮನಿರಲಿ ಹೇಗೆ?

ಬರೆಯಲೇಬಾರದೆ೦ದು ಕೂತವನೊಳಗೆ

ಕಾಡುವ ಮೌನ

ಒತ್ತರಿಸಿ ಬರುವ ಸ೦ಕಟ

ಬಿಕ್ಕಳಿಸಲಗದೆ ಕಟ್ಟುವ

ಗ೦ಟಲು(ಅದಕ್ಕೂ ನನ್ನ ಮೇಲೆ ಕೋಪ)

ಯಾರದೋ ಮದುವೆ

ಇನ್ಯಾರದೋ ಮಸಣಯಾತ್ರ್ರೆಯ

ನೋಡಿ ಬರೆದ ಪದಗಳು

ಅಣಕಿಸುತಿವೆ

ಬರೆಯಲೇಬಾರದೆ೦ದು ಕೂತವನಿಗೆ

ಅ೦ಗಿಯ ಜಗ್ಗಿ

ಕಿವಿಯಲಿ ಪಿಸುಗುಟ್ಟಿ

ಬಿಸಿಯುಸಿರ ತಾಕಿಸಿ

ಗಟ್ಟಿಯಾದ ಭಾವಗಳನು

ಹರಿಬಿಡಲು ನೆರವಾದವಳು

ನೀನೇ ಹುಡುಗಿ